ಅಥ್ಲೆಟಿಕ್ಸ್ ಅಸೋಸಿಯೇಷನ್ ನಿರ್ಲಕ್ಷ್ಯಕ್ಕೆ ಅವಕಾಶ ವಂಚಿತಳಾದ ಕ್ರೀಡಾಪಟು
ಮಂಗಳೂರು, ಜೂನ್ 21: ಅಧಿಕಾರಿಗಳ ನಿರ್ಲಕ್ಷದಿಂದ ಪ್ರತಿಭಾನ್ವಿತ ಕ್ರಿಡಾಪಟು ಒಬ್ಬಳು ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಲಾಗದೇ ಅವಕಾಶ ವಂಚಿತಳಾದ ಪ್ರಸಂಗ ಬೆಳಕಿಗೆ ಬಂದಿದೆ.
ಮಂಗಳೂರಿನ ರಾಷ್ಟ್ರೀಯ ಮಟ್ಟದ ತ್ರಿಪ್ಪಲ್ ಜಂಪ್ ಕ್ರೀಡಾಪಟು ಜಾಯ್ಲಿನ್ ಎಂ ಲೋಬೋ ಅಸ್ಸಾಂನ ಗುವಾಹಾಟಿಯಲ್ಲಿ ಇದೇ ಬರುವ ಜೂನ್ 26 ರಿಂದ 29 ರ ವರೆಗೆ ನಡೆಯಲಿರುವ 58ನೇ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಅವಕಾಶ ದಿಂದ ವಂಚಿಳಾಗಿರುವ ಘಟನೆ ನಡೆದಿದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಅಧಿಕಾರಿಗಳ ನಿರ್ಲಕ್ಷದಿಂದ ಪ್ರತಿಭಾನ್ವಿತ ಕ್ರೀಡಾಪಟುವೊಬ್ಬರಿಗೆ ಅವಕಾಶ ತಪ್ಪಿದಂತಾಗಿದೆ.
ತ್ರಿಪ್ಪಲ್ ಜಂಪ್ ಪಟು ಜಾಯ್ಲಿನ್ .ಎಂ. ಲೋಬೋ ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿದ್ದು ಹಲವಾರು ರಾಷ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಕಳೆದ ಬಾರಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ 57 ನೇ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ತ್ರಿಪ್ಪಲ್ ಜಂಪ್ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿದ್ದರು.
ಜೂನ್ 26 ರಿಂದ ಗುವಹಾಟಿಯಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಾಗಿ ಈಗಾಗಲೇ ಸರ್ವ ಸಿದ್ಧತೆಯನ್ನು ಜಾಯ್ಲಿನ್ ಲೋಬೋ ನಡೆಸಿದ್ದರು. ಆದರೆ ಗುವಹಾಟಿಯಲ್ಲಿ ಭಾಗವಹಿಸುವ ತಂಡವನ್ನು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಈ ತಂಡದಲ್ಲಿ ಜಾಯ್ಲಿನ್ ಲೋಬೋ ಹೆಸರು ಮಾತ್ರ ಕಾಣೆಯಾಗಿದೆ.
ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇದೀಗ ಪ್ರತಿಭಾನ್ವಿತ ಕ್ರೀಟಾಪಟುವೊಬ್ಬರು ಅವಕಾಶ ವಂಚಿತರಾಗಿದ್ದಾರೆ. ಗುವಾಹಟಿಯಲ್ಲಿ ನಡೆಯಲಿರುವ ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮುಂದಿನ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಜಾಯ್ಲಿನ್ ಈ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಾಗಿ ಭರ್ಜರಿ ತಯಾರಿಯನ್ನೂ ನಡೆಸಿದ್ದರು.
Dear @Ra_THORe - rqst u to pls look into this. https://t.co/3Jsg70LbUE
— Rajeev Chandrasekhar (@rajeev_mp) June 21, 2018
ತಮ್ಮಿಂದಾದ ಪ್ರಮಾದ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಈಗ ಜಾಯ್ಲಿನ್ ಲೋಬೋಗೆ ಅವಕಾಶ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ಎ. ರಾಜವೇಲು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಈ ನಡುವೆ ಅವಕಾಶ ವಂಚಿತ ಕ್ರೀಡಾಪಟು ಜಾಯ್ಲಿನ್ ಲೋಬೋ ಅವರಿಗೆ ಗುವಾಹಾಟಿ ಯಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಟ್ವಿಟರ್ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ಸಂಸದ ರಾಜೀವ್ ಚಂದ್ರಶೇಕರ್ ಕೂಡ ಕೈಜೋಡಿಸಿದ್ದಾರೆ. ಆದರೆ ಈ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಸರ್ವರೀತಿಯಲ್ಲಿ ಸಿದ್ದರಾಗಿರುವ ಕ್ರೀಡಾಪಟು ಜಾಯ್ಲಿನ್ ಲೋಬೋ ಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದೇ? ಎನ್ನುವುದನ್ನು ಕಾದು ನೋಡಬೇಕಿದೆ.