ಮಂಗಳೂರು ದಸರಾ; ದೇಗುಲಗಳಲ್ಲಿ ಸಂಭ್ರಮದ ನವರಾತ್ರಿ ಪೂಜೆ
ಮಂಗಳೂರು, ಅಕ್ಟೋಬರ್ 23: ಮಂಗಳೂರಿನ ಐತಿಹಾಸಿಕ ಕುದ್ರೋಳಿ ದೇಗುಲದಲ್ಲಿ ನವರಾತ್ರಿಯ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನೆರವೇರುತ್ತಿವೆ. ಮೈಸೂರಿನಲ್ಲಿ ನಡೆಯುವ ದಸರಾದಂತೆ ಮಂಗಳೂರಿನ ದಸರಾವನ್ನೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಕಾರಣವಾಗಿ ಕೆಲವು ಷರತ್ತುಗಳೊಂದಿಗೆ ನವರಾತ್ರಿಯನ್ನು ಸಂಭ್ರಮಿಸಲಾಗುತ್ತಿದೆ.
ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17ರಂದು ದಸರಾಗೆ ಚಾಲನೆ ನೀಡಲಾಗಿದ್ದು, 9 ದಿನಗಳ ಕಾಲ ಉತ್ಸವ ಮುಂದುವರೆಯಲಿದೆ. 9 ದಿನಗಳ ಕಾಲ ಇಲ್ಲಿ ನವದುರ್ಗೆಯರನ್ನು ಪೂಜಿಸಿ, ಹತ್ತನೇ ದಿನ ಶಾರದಾ ದೇವಿಯ ಭವ್ಯ ಮೆರವಣಿಗೆ ನಡೆಯುತ್ತದೆ. ಈ ಬಾರಿ "ನಮ್ಮ ದಸರಾ-ನಮ್ಮ ಸುರಕ್ಷತೆ" ಘೋಷವಾಕ್ಯದಡಿ ಮಂಗಳೂರಿನಲ್ಲಿ ದಸರಾ ಆರಂಭವಾಗಿದೆ. ಕೋವಿಡ್ ವಾರಿಯರ್, ಎನ್ಆರ್ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಅ.26ರವರೆಗೂ ಉತ್ಸವ ಮುಂದುವರೆಯಲಿದೆ.
ದೇಗುಲದಲ್ಲಿ ನವ ದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇಗುಲಗಳಲ್ಲೂ ನವರಾತ್ರಿ ಹಬ್ಬ ನಡೆಯುತ್ತಿದ್ದು, ಮಂಗಳಾದೇವಿ, ಕದ್ರಿ ಮಂಜುನಾಥ, ಮಾರಿಗುಡಿ, ಕಟೀಲು ದುರ್ಗಾ ಪರಮೇಶ್ವರಿ, ಧರ್ಮಸ್ಥಳ, ಪೊಳಲಿ ರಾಜರಾಜೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಪೂಜೆಯನ್ನು ನೆರವೇರಿಸಲಾಗುತ್ತಿದೆ.

ಉಡುಪಿ ಜಿಲ್ಲೆಯ ಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕೆ. ಕಮಲ ಶಿಲೆ ದುರ್ಗಾ ಪರಮೇಶ್ವರಿ, ಅಂಬಾಲಪಾಡಿ ಮಹಾಕಾಳಿ, ಆನೆಗುಡ್ಡೆ ವಿನಾಯಕ ದೇಗುಲಗಳಲ್ಲಿ ನವರಾತ್ರಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.












Click it and Unblock the Notifications