ಮಂಗಳೂರಿನಲ್ಲಿ ಕ್ರೈಸ್ತ ಬಾಂಧವರಿಂದ ತೆನೆ ಹಬ್ಬ ಆಚರಣೆ
ಮಂಗಳೂರು, ಸೆಪ್ಟೆಂಬರ್ 08 : ಕರಾವಳಿ ಭಾಗದ ಕ್ರೈಸ್ತ ಭಾಂಧವರ ಅತ್ಯಂತ ಶ್ರದ್ಧೆಯ ಹಬ್ಬವಾದ ತೆನೆ ಹಬ್ಬ ಸೆಪ್ಟಂಬರ್ ತಿಂಗಳಲ್ಲಿ ಹೆಚ್ಚಾಗಿ ಬರುತ್ತದೆ. ಈ ಸಮಯದಲ್ಲಿ ಮಳೆಗಾಲದ ಕೊನೆಯಾಗುತ್ತಿದ್ದು, ಪ್ರಕೃತಿಯ ಹಚ್ಚ ಹಸಿರಿನಿಂದ ಕಂಗೊಳಿಸಿರುತ್ತದೆ.
ಬೆಳೆಗಳು ಹುಲುಸಾಗಿ ಬೆಳೆದು, ನಳ ನಳಿಸಿ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವ ವಿವಿಧ ಆಚರಣೆಗಳು ಕರಾವಳಿಯಲ್ಲಿ ನಡೆಯುತ್ತದೆ. ಕರ್ನಾಟಕದಲ್ಲಿ ಪ್ರಕೃತಿ ಮಾತೆಯ ವಂದನಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಅವಿಬಾಜಿತ ದಕ್ಷಣ ಕನ್ನಡ ಜಿಲ್ಲೆಯ ಕೊಂಕಣಿ ಕೆಥೋಲಿಕ್ ಕ್ರೈಸ್ತರು ಇದನ್ನು ಮೊಂತಿ ಫೆಸ್ತ್ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.
ಬೆಂಗಳೂರು:ಸೆ.08ರಂದು ಮೇರಿ ರಥೋತ್ಸವ, ವಾಹನ ಸಂಚಾರ ನಿಷೇಧ
ಇಲ್ಲಿನ ಕ್ರೈಸ್ತ ಭಾಂಧವರು ಆಚರಿಸುವಂತಹ ಮೋಂತಿ ಫೆಸ್ತ್ ಅಥವಾ ತೆನೆ ಹಬ್ಬಕೆ ತನ್ನದೇ ಆದ ವಿಶಿಷ್ಟತೆಗಳಿವೆ. ಧಾರ್ಮಿಕ ಮತ್ತು ಸಾಂಸ್ಕತಿಕ ಎಂಬ ಎರಡು ಆಯಾಮಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ.ಯೇಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನ ಸೆಪ್ಟಂಬರ್ 8 ಆಗಿದ್ದು, ಮೇರಿ ಮಾತೆ ದೇವ ಮಾತೆ ಆಗಿದ್ದು ಪವಾಡಗಳನ್ನು ಸೃಷ್ಟಿಸುತ್ತಾರೆ ಮತ್ತು ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸುತ್ತಾರೆ ಎನ್ನುವುದು ಕೆಥೋಲಿಕರ ನಂಬಿಕೆ.
ತುಳುನಾಡು ಕೃಷಿ ಪ್ರಧಾನ ನಾಡೆಂದೇ ಪ್ರಖ್ಯಾತಿ ಪಡೆದಿದೆ ಇಲ್ಲಿ ಕೃಷಿಯೇ ಪ್ರಧಾನ. ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಬಳಸುವ ಮೊದಲು ದೇವರಿಗೆ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ದೇವರಿಗೆ ಸಮರ್ಪಿಸಿ ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಸಂಭ್ರಮದಿಂದ ತಿನ್ನುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಸಂಪ್ರದಾಯ ಹಿಂದೂ ಧರ್ಮಿಯರಲ್ಲಿ ಮಾತ್ರವಲ್ಲದೆ ಇಲ್ಲಿಯ ಕ್ರೈಸ್ತ ಧರ್ಮೀಯರೂ ಆಚರಿಸಿಕೊಂಡು ಬರುತ್ತಿದ್ದಾರೆ.
ತೆನೆ ಹಬ್ಬದ ಹಿನ್ನಲೆ
ಮೊಂತಿ ಫೆಸ್ಟ್ ಹುಟ್ಟು ಎಲ್ಲಿ? ಯಾವಾಗ? ಹೇಗಾಯಿತು ಎನ್ನುವ ಕುರಿತು ನಿರ್ಧಿಷ್ಟವಾಗಿ ತಿಳಿಸುವ ಐಹಿತ್ಯಗಳಿಲ್ಲ. ಇದರ ಹುಟ್ಟು ಮತ್ತು ಹಿನ್ನಲೆಯ ಬಗ್ಗೆ ಬೇರೆ ಬೇರೆ ಉಲ್ಲೇಖಗಳು ಕಂಡು ಬರುತ್ತವೆ. ಮಂಗಳೂರು ಹೊರ ಹೊಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳ ಹಿಂದೆ ಮೊಂತಿ ಫೆಸ್ತ್ ಆಚರಣ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ. ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಮಠವೊಂದು ಇಲ್ಲಿ ಸ್ಥಾಪನೆಯಾಗಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಇದರ ಸ್ಪೂರ್ಥಿ ಪಡೆದು ಕರಾವಳಿಯ ಕೆಥೋಲಿಕ್ ಕ್ರೈಸ್ತ ಪೂರ್ವಜರು ಸೆಪ್ಟಂಬರ್ 8 ರಂದು ಮೇರಿ ಮಾತೆಯ ಜನ್ಮ ದಿನದಂದೆ ತೆನೆ ಹಬ್ಬವನ್ನು ಆಚರಿಸಲು ಆರಂಭಿಸಿದರು ಎನ್ನುವುದಾಗಿದೆ.
ತೆನೆ ಹಬ್ಬದ ವೈಶಿಷ್ಟಗಳು
ಈ ಹಬ್ಬದ ಬೇರುಗಳು ಎಷ್ಟೊಂದು ಆಳವಾಗಿ ಬೇರೂರಿವೆ ಎಂದರೆ ಕರಾವಳಿಯ ಕೆಥೋಲಿಕರು ಎಲ್ಲಿಯೇ ವಾಸಿಸುತ್ತಿದ್ದರೂ, ಅಲ್ಲೆಲ್ಲಾ ತಮ್ಮ ಸಾಧ್ಯತೆಗೆ ಅನುಸಾರವಾಗಿ ಇದನ್ನು ಆಚರಿಸುತ್ತಾರೆ. ದೇಶದ ಒಳಗಿನ ಮುಂಬಯಿ ಮತ್ತಿತರ ನಗರಗಳಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ, ಇಂಗ್ಲೆಂಡ್, ಅಮೇರಿಕಾ, ಕೆನಡಾಗಳಲ್ಲೂ ಇದನ್ನು ಆಚರಣೆ ಮಾಡಲಾಗುತ್ತದೆ. ಇಲ್ಲಿಂದ ವಿಮಾನ ಮೂಲಕ ಕೊಂಡೊಯ್ಯುವ ಹೊಸ ಭತ್ತದ ತೆನೆಗಳನ್ನು ಆಶೀರ್ವಚನ ಮಾಡಿ ಮನೆಗೆ ಒಯ್ದು, ಭಕ್ತಿ , ಶ್ರದ್ಧೆಯಿಂದ ಬೋಜನ ಸೇವಿಸುತ್ತಾರೆ. ತುಳು ನಾಡಿನಲ್ಲಿ ಯಾವುದೇ ಹೊಸ ಬೆಳೆಯ ಫಸಲು ಬಂದಾಗ ಅವರ ಪ್ರಥಮ ಫಲವನ್ನು ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ ದೇವರಿಗೆ, ದೈವಗಳಿಗೆ ಅರ್ಪಿಸಿ , ದೇವರ ಕೃಪಾವರಗಳಿಗೆ ಕೃತಜ್ಞತೆ ಸಲ್ಲಿಸಿ ಶುಭಾಶೀರ್ವಾದಗಳಿಗಾಗಿ ಪ್ರಾಥನೆ ಸಲ್ಲಿಸುವುದು ಆನಾದಿ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯವಾಗಿದೆ.
ತೆನೆ ಹಬ್ಬ ಆಚರಣೆ
9 ದಿನ ಮುಂಚಿತವಾಗಿ ಅಂದರೆ ಅಗಸ್ಟ್ 30 ರಿಂದ ಚರ್ಚ್ ಗಳಲ್ಲಿ ವಿಶೇಷವಾಗಿ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಹಬ್ಬದ ಆಚರಣೆಗೆ ನಾಂದಿಯಾಗುತ್ತದೆ. 9 ದಿನಗಳ ಕಾಲ ನಡೆಯುವ ನೊವೇನಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಚಿಕ್ಕ ಮಕ್ಕಳು ಪ್ರತಿದಿನ ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸಿ ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುತಾರೆ.
ಸೆಪ್ಟಂಬರ್ 8 ರಂದು ಹಬ್ಬದ ಸಂಭ್ರಮ
ಕೊನೆಯ ದಿನ ಅಂದರೆ ಸೆಪ್ಟಂಬರ್ 8 ರಂದು ಹಬ್ಬದ ಸಂಭ್ರಮವನ್ನು ಸಾಮುದಾಯಿಕವಾಗಿ ಮತ್ತು ಕೌಟುಂಬಿಕವಾಗಿ ಆಚರಿಸುತ್ತಾರೆ. ಅಂದು ಹೊಸ ಭತ್ತದ ತೆನೆಗಳನ್ನು ಚರ್ಚ್ ಗೆ ಕೊಂಡೊಯ್ದು ಆಶೀರ್ವಚನ ಮಾಡಿ, ಮೇರಿ ಮಾತೆಗೆ ಪುಷ್ಪಾರ್ಚನೆ ನಡೆಯುತ್ತೆದ. ಬಳಿಕ ಸಂಭ್ರಮದ ಬಲಿ ಪೂಜೆ ನೆರವೇರುತ್ತದೆ. ಈ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಆಶೀರ್ವದಿಸಿದ ಭತ್ತದ ತೆನೆಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಗುತ್ತದೆ. ಹೂವು ಕೊಂಡು ಹೋದ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಾಗೂ ಕಬ್ಬನ್ನು ಹಂಚಲಾಗುತ್ತದೆ. ಮಕ್ಕಳಿಗೆ ವಿತರಿಸಿದ ಬಳಿಕ ಕಬ್ಬು ಉಳಿಕೆಯಾದರೆ ಅದನ್ನು ಹಿರಿಯರಿಗೂ ಹಂಚಲಾಗುತ್ತದೆ. ಆ ನಂತರದ ಸಂಭ್ರಮ ಮನೆಗಳಲ್ಲಿ ನಡೆಯುತ್ತದೆ.
ನವೆಂ ಜೆವಾಣ್ (ಹೊಸ ಭೋಜನ)
ನವೆಂ ಜೆವಾಣ್ ಅಂದರೆ ಹೊಸ ಭೋಜನ ಎಂದರ್ಥ. ಸಸ್ಯಾಹಾರಿ ಭೋಜನವು ಈ ದಿನದ ವಿಶೇಷವಾಗಿದ್ದು, ಕನಿಷ್ಟ 3 ಅಥವಾ 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಬಾಳೆ ಎಲೆಯಲ್ಲಿ ಊಟ ಮಾಡುವುದೂ ಇದರ ಇನ್ನೊಂದು ವೈಶಿಷ್ಟ್ಯ.