ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಮುಚ್ಚಿಹಾಕುತ್ತಿದೆಯೇ 'ಆಳ್ವಾಸ್'?
ಮಂಗಳೂರು, ಜುಲೈ 26: ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆ ಪ್ರಕರಣ ಈಗ ವಿವಾದಕ್ಕೆ ಗುರಿಯಾಗಿದೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದ 15 ವರ್ಷದ ಕಾವ್ಯಾ ಜುಲೈ 20ರಂದು ಕಾಲೇಜಿನ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೋಷಕರಿಗೆ ತಿಳಿಸಲಾಗಿತ್ತು.

ಆದರೆ, ಹೆತ್ತವರು ಹಾಸ್ಟೆಲ್ ತಲುಪುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಇದೀಗ ಹೆತ್ತವರು ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದು, 'ಪ್ರಕರಣವನ್ನು ಮುಚ್ಚಿ ಹಾಕಲು ಸಂಸ್ಥೆಯ ಆಡಳಿತ ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ್ದಾರೆ.
"ತಮ್ಮ ಹುಡುಗಿ ಕ್ರೀಡಾಪಟುವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆಕೆಯನ್ನು ಶಾಲೆಯವರೇ ಕಿರುಕುಳ ಕೊಟ್ಟು ಕೊಲೆಗೈದಿರುವ ಸಂಶಯ ಇದೆ," ಎಂದು ವಿದ್ಯಾರ್ಥಿನಿಯ ತಾಯಿ ಬೇಬಿ ಆರೋಪಿಸಿದ್ದಾರೆ.

"ಘಟನೆ ನಡೆದ ದಿನ ರಾತ್ರಿ ಎಂಟು ಗಂಟೆಗೆ ಶಾಲೆಯ ದೈಹಿಕ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ನಾವು ಅಲ್ಲಿಗೆ ತಲುಪುವ ಮುನ್ನವೇ ಶವವನ್ನು ಶವಾಗಾರದಲ್ಲಿರಿಸಿದ್ದಲ್ಲದೆ, ತಮಗೆ ಸರಿಯಾಗಿ ನೋಡುವುದಕ್ಕೂ ಅವಕಾಶ ನೀಡಿಲ್ಲ," ಎಂದು ಆರೋಪಿಸಿದ್ದಾರೆ.
ಹೀಗಾಗಿ, "ನಮ್ಮ ಹುಡುಗಿ ಹೇಗೆ ಸಾವನ್ನಪ್ಪಿದ್ದಾಳೆ ಎನ್ನುವುದು ಗೊತ್ತಾಗಬೇಕು. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಬೇಕು," ಎಂದು ಬೇಬಿ ಒತ್ತಾಯಿಸಿದ್ದಾರೆ.

ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯಾ ಸಣ್ಣಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು.
ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ. ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು. ಇದೇ ಜುಲೈ ಆರಂಭದಲ್ಲಿ ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢ ಸಾವು ಕಂಡಿದ್ದು ಹೆತ್ತವರನ್ನು ಆತಂಕಕ್ಕೀಡು ಮಾಡಿದೆ.












Click it and Unblock the Notifications