ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಂಪತಿ ಕುದ್ರೋಳಿಗೆ ಭೇಟಿ
ಪ್ರಧಾನಿ ಮೋದಿಯವರು ಈ ದೇಶಕ್ಕಾಗಿ ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿಯನ್ನು ದೇವರು ಕೊಡಲಿ ಎಂದು ಮೋದಿ ಸಹೋದರ ಪ್ರಹ್ಲಾದ್ ಮೋದಿ ಮಂಗಳೂರಿನಲ್ಲಿ ಹೇಳಿದ್ದಾರೆ.
ಮಂಗಳೂರು, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ತನ್ನ ಪತ್ನಿ ಭಗವತಿ ಮೋದಿ ಸಹಿತ ಸೋಮವಾರ ಸಂಜೆ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕದ್ರಿ ಕ್ಷೇತ್ರದ ವತಿಯಿಂದ ಪ್ರಹ್ಲಾದ್ ಮೋದಿ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಪ್ರಹ್ಲಾದ್ ಮೋದಿಯವರನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಬರಮಾಡಿಕೊಂಡರು.[ಮಂಗಳೂರಿನ ವೀರಯೋಧ ಸಂತೋಷ್ ಮನೆಗೆ ಗಣ್ಯರ ಭೇಟಿ]

ತದನಂತರ ಕುದ್ರೋಳಿ ಶ್ರೀ ಗೋಕರ್ಣಾನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಪ್ರಹ್ಲಾದ್ ಮೋದಿ ದಂಪತಿ ದೇವಾಲಯವನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನ ಭೇಟಿ ಸಂದರ್ಭ ಮಾತನಾಡಿದ ಮೋದಿ ಸಹೋದರ ಪ್ರಹ್ಲಾದ್ ಮೋದಿ, "ಪ್ರಧಾನಿ ಮೋದಿಯವರು ಈ ದೇಶಕ್ಕಾಗಿ ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿಯನ್ನು ದೇವರು ಕೊಡಲಿ. ಲೋಕ ಕಲ್ಯಾಣಾರ್ಥವಾಗಿ ದಕ್ಷಿಣ ಭಾರತದ ದೇವಳಗಳ ಭೇಟಿಯನ್ನು ಕುಟುಂಬ ಸಮೇತ ಮಾಡುತ್ತಿದ್ದೇವೆ. ಈಗಾಗಲೇ ಹಂಪಿ ಭೇಟಿ ಮಾಡಿ ಮಂಗಳೂರಿಗೆ ಭೇಟಿ ನೀಡಿದ್ದೇನೆ. ಸಮಯದ ಅಭಾವ ಇರುವುದರಿಂದ ಮಂಗಳೂರು ಎರಡು ಪುಣ್ಯ ಕ್ಷೇತ್ರಗಳನ್ನು ಮಾತ್ರ ಭೇಟಿ ಮಾಡಲು ಸಾಧ್ಯವಾಯಿತು," ಎಂದರು.[ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ: ಸಿಐಡಿ ತನಿಖೆಗೆ ಆದೇಶ]

ನಂತರ ಮೋದಿ ಸಹೋದರ ಮಂಗಳೂರಿನಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದರು. ಸ್ವಂತ ವಾಹನದ ಮೂಲಕ ದಕ್ಷಿಣ ಭಾರತ ಪ್ರವಾಸವನ್ನು ಕೈಗೊಂಡ ಪ್ರಹ್ಲಾದ್ ಮೋದಿ ತಂಡದಲ್ಲಿ ಒಟ್ಟು 20ಮಂದಿ ಕುಟುಂಬ ಸದಸ್ಯರಿದ್ದರು.












Click it and Unblock the Notifications