ನಳಿನ್ ಕುಮಾರ್ ಕಟೀಲ್ರನ್ನು ಕಾಂಗ್ರೆಸ್ಗೆ ಆಹ್ವಾನಿಸಿದ ಯು. ಟಿ. ಖಾದರ್!
ಮಂಗಳೂರು, ಡಿಸೆಂಬರ್ 07; "ನಳಿನ್ ಕುಮಾರ್ ಕಟೀಲ್ ಕೂಡಾ ವಿದ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಈಗ ಮತ್ತೆ ಮರಳಿ ಪಕ್ಷಕ್ಕೆ ಬರೋದಾದರೆ ಸ್ವಾಗತ ಕೋರುವುದಾಗಿ" ಕಾಂಗ್ರೆಸ್ ನಾಯಕ, ಮಾಜಿ ಸಚಿವ ಯು. ಟಿ. ಖಾದರ್ ಹೇಳಿದರು.
" ಯು. ಟಿ. ಖಾದರ್ ಮತ್ತು ರಮಾನಾಥ್ ರೈ ಹೊರತು ಪಡಿಸಿ ಉಳಿದ ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಕರೆ ತನ್ನಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಯು. ಟಿ. ಖಾದರ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಟಾಂಗ್ ನೀಡಿದರು.
"ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಬಿಜೆಪಿಗೆ ಕರೆತರಲು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಒಳ್ಳೆಯವರು, ಹಾಗಾಗಿ ಒಳ್ಳೆಯವರನ್ನು ಪಕ್ಷಕ್ಕೆ ಸೇರಿಸಲು ನಳಿನ್ ಕುಮಾರ್ ಕಟೀಲ್ ಹೇಳಿರಬಹುದು" ಎಂದರು.
ನಳಿನ್ ಕುಮಾರ್ ಹೇಳಿಕೆ ಹಿಂದಿನ ಕಾರಣ ಬಿಚ್ಚಿಟ್ಟ; ಪ್ರಿಯಾಂಕ್ ಖರ್ಗೆ
"ನಳಿನ್ ಕುಮಾರ್ ವಿದ್ಯಾರ್ಥಿ ಜೀವನದಲ್ಲಿದ್ದಾಗ, ಆಗ ಎನ್ಎಸ್ಯುಐನಲ್ಲಿದ್ದ ಕಾಂಗ್ರೆಸ್ನ ವಿನಯ್ ಕುಮಾರ್ ಸೊರಕೆ ಪರ ದುಡಿದಿದ್ದರು. ಕಾಂಗ್ರೆಸ್ ಕಾರ್ಯಕರ್ತನಾಗಿ ನಳಿನ್ ಕೆಲಸ ಮಾಡುತ್ತಿದ್ದರು. ನಳಿನ್ಗೆ ಈಗ ಹಿಂದಿನ ಕೆಲಸ ನೆನಪಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಬದ್ಧತೆ ಹಾಗೂ ಶಕ್ತಿ ನಳಿನ್ಗೆ ಗೊತ್ತಿದೆ. ಹೀಗಾಗಿ ನಳಿನ್ ಕುಮಾರ್ ಮತ್ತೆ ಪಕ್ಷಕ್ಕೆ ಬರೋದಾದರೆ ಸ್ವಾಗತ ಕೋರುತ್ತೇನೆ" ಎಂದು ಹೇಳಿದರು.
ಎಚ್ಡಿಕೆ ಒಂದು ವಾರ ಆರ್ಎಸ್ಎಸ್ ಶಾಖೆಗೆ ಬರಲಿ; ನಳಿನ್ ಅಹ್ವಾನ
"ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದವರ ಕಥೆ ಏನಾಗಿದೆ? ಅಂತಾ ನೋಡಿಕೊಳ್ಳಬೇಕು. ಮೇಧಾವಿ ರಾಜಕಾರಣಿಗಳಾದ ಸುಬ್ರಹ್ಮಣ್ಯ ಸ್ವಾಮಿ ಮತ್ತು ರಾಮ್ ಜೇಠ್ಮಲಾನಿ ಏನು ಹೇಳುತ್ತಾರೆ ಎಂಬುವುದನ್ನು ಗಮನಿಸಿ. ಕಾಂಗ್ರೆಸ್ನಲ್ಲಿ ಸಮಾಧಾನ ಇಲ್ಲ ಅಂತಾ ಬಿಜೆಪಿಗೆ ಹೋದರೆ ಅಲ್ಲಿ ಸಮಾಧಾನ ಸಿಗುತ್ತಾ? ಯೋಚಿಸಿ ನೋಡಿ" ಎಂದು ಕಿವಿಮಾತು ಹೇಳಿದರು.
ನಳಿನ್ ಕುಮಾರ್ ನಗುವನ್ನು ಮಿಮಿಕ್ರಿ ಮಾಡೋಕೆ ಸಾಧ್ಯವೇ ಇಲ್ಲ; ಬಿ. ರಮಾನಾಥ್ ರೈ
ಇನ್ನು ವಿಧಾನಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಯು. ಟಿ. ಖಾದರ್, "ಪಂಚಾಯತ್ ರಾಜ್ ವ್ಯವಸ್ಥೆಗೆ ಬಿಜೆಪಿ ಸರ್ಕಾರ ಮಾರಕವಾಗಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ ವಿರುದ್ದ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿ ವಿರುದ್ದ ಗ್ರಾಮ ಪಂಚಾಯತ್ ಸದಸ್ಯರು ಸ್ವಾಭಿಮಾನದ ಮತ ಚಲಾಯಿಸಬೇಕು. ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಬೇಕು" ಎಂದು ಮನವಿ ಮಾಡಿದರು.
"ಪಂಚಾಯತ್ ರಾಜ್ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಎಲ್ಲಾ ವ್ಯವಸ್ಥೆಯನ್ನು ಬಿಜೆಪಿ ಮಾಡಿದೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಕಾಂಗ್ರೆಸ್ ಪೂರಕ ಕೆಲಸ ಮಾಡಿದೆ. ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತ್ತು. ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಕಾಂಗ್ರೆಸ್ ಅರ್ಹ ಅಭ್ಯರ್ಥಿ ಕಣಕ್ಕಿಳಿಸಿದೆ. ಪಂಚಾಯತ್ ರಾಜ್ ವಿಷಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪಿಎಚ್ಡಿ ಮಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಶತ ಸಿದ್ದ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ನಿರಂತರ ಅಪರಾಧ ಪ್ರಕರಣಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಖಾದರ್, "ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಮರ್ಪಕ ನಿರ್ವಹಿಸಬೇಕು. ಧಾರ್ಮಿಕ ಸಂಘಟನೆಗಳೂ ಸಕಾರಾತ್ಮಕ ಆಲೋಚನೆಯಿಂದ ಜನ ಸಾಮಾನ್ಯ ನೆಮ್ಮದಿಯಿಂದ ಜೀವಿಸುವಂತೆ ಮಾಡಬೇಕು. ಕೆಲವೊಬ್ಬರು ತಮ್ಮ ಲಾಭಕ್ಕಾಗಿ ಸಮಾಜಕ್ಕಾಗಿ ಗಂಡಾಂತರ ಸೃಷ್ಠಿ ಮಾಡುತ್ತಾರೆ. ಇವರನ್ನು ದೇಶದ್ರೋಹಿಗಳು ಅಂತಾ ಭಾವಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವು ಘಟನೆಗಳಾದಾಗ ನಿರ್ದಿಷ್ಟವಾದ ಕ್ರಮ ಕೈಗೊಳ್ಳಬೇಕು. ಸುರತ್ಕಲ್ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣವಾದಾಗ ಅಲ್ಲಿಯ ಶಾಸಕ ಆರೋಪಿಗಳನ್ನು ಬಿಡಿಸಿದರು. ಇದು ಅಪರಾಧಿಗಳಿಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಬಿಜೆಪಿ ಅಧಿಕಾರಕ್ಕೆ ಬಂದನಂತರ ಗೋಕಳ್ಳತನ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ 12 ಭೀಪ್ ಎಕ್ಸ್ ಪೋರ್ಟ್ ಕಂಪನಿಗಳು ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ ತಾಖತ್ ಇದ್ದರೆ ಆ ಕಂಪನಿಗಳನ್ನು ಬಂದ್ ಮಾಡಲಿ. ಸರ್ಕಾರ ಯಾಕೆ ಬಂದ್ ಮಾಡುತ್ತಿಲ್ಲ. ದೇಶದಲ್ಲಿ ಕಾನೂನು ತರದೇ ರಾಜಕೀಯ ಆಟ ಆಡಬೇಡಿ" ಎಂದು ಖಾದರ್ ಆಗ್ರಹಿಸಿದರು.