ಫಾಜಿಲ್, ಮಸೂದ್ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ
ಮಂಗಳೂರು, ಆಗಸ್ಟ್ 12: ಪ್ರವೀಣ್ ನೆಟ್ಟಾರ್ ಹತ್ಯೆಯಾಗುವ ಆರು ದಿನಗಳ ಮೊದಲು ಹತ್ಯೆಯಾದ ಮಸೂದ್ ಮತ್ತು ಪ್ರವೀಣ್ ಹತ್ಯೆಯಾದ ಎರಡು ದಿನಗಳ ಬಳಿಕ ಹತ್ಯೆಯಾದ ಸುರತ್ಕಲ್ನ ಫಾಜೀಲ್ ಕುಟುಂಬಕ್ಕೆ ಸರಕಾರದಿಂದ ಪರಿಹಾರ, ಸರಕಾರದ ಪ್ರತಿನಿಧಿಗಳಿಂದ ಸಾಂತ್ವಾನದ ಮಾತುಗಳೂ ಬಂದಿಲ್ಲ. ಸರಕಾರದಿಂದ ಪರಿಹಾರ ಬಾರದಿದ್ದರೇನು, ಸರಕಾರಕ್ಕಿಂತ ಹೆಚ್ಚು ಪರಿಹಾರ ನೀಡುತ್ತೇವೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಮುಂದೆ ಬಂದಿದೆ.
ಹತ್ಯೆಯಾದ ಮಸೂದ್ ಮತ್ತು ಸುರತ್ಕಲ್ ನ ಫಾಜಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗ ಗುರುವಾರ ಮಂಗಳಪೇಟೆಯಲ್ಲಿರುವ ಫಾಜಿಲ್ ಮನೆಗೆ ಹಾಗೂ ಬೆಳ್ಳಾರೆಯಲ್ಲಿರುವ ಮಸೂದ್ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದೆ. ಈ ಸಂದರ್ಭದಲ್ಲಿ ಕಮಿಟಿ ಸಂಗ್ರಹಿಸಿದ ನಿಧಿಯಿಂದ ಎರಡು ಕುಟುಂಬಗಳಿಗೆ ತಲಾ 30 ಲಕ್ಷರೂ. ನಂತೆ ಒಟ್ಟು 60 ಲಕ್ಷ ರೂ.ವಿತರಿಸಿದೆ.
ಸುರತ್ಕಲ್ ನ ಫಾಜೀಲ್ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮಹಮ್ಮದ್ ಮಸೂದ್, ಜಾತಿಮತ ಬೇಧವಿಲ್ಲದೆ ಬಡವರಿಂದ ಹಿಡಿದು ಶ್ರೀಮಂತರವರೆಗೂ ಹತ್ಯೆಗೀಡಾದ ಮಸೂದ್ ಹಾಗೂ ಫಾಜಿಲ್ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿದ್ದಾರೆ. ಪರಿಹಾರ ನೀಡಿ ಉಳಿದ ಹಣವನ್ನು ಬಡವರ್ಗದ ಕಷ್ಟಗಳಿಗೆ ಸ್ಪಂದಿಸಲು ವಿನಿಯೋಗಿಸುತ್ತೇವೆ ಎಂದರು.

ಪ್ರವೀಣ್ ಕುಟುಂಬಸ್ಥರ ಭೇಟಿ; ಕಷ್ಟದಲ್ಲಿರುವವರಿಗೆ ನೆರವಾಗುವುದೇ ಮಾನವೀಯ ಧರ್ಮ, ದೇವರು ಒಬ್ಬನೇ ಎಂದು ನಾವೆಲ್ಲಾ ನಂಬಿರುವಾಗ ಯಾವುದೇ ಕಾರಣಕ್ಕೂ ಬೇಧಭಾವ ಸಲ್ಲದು. ದೇಶದ ಎಲ್ಲಾ ಪ್ರಜೆಗಳು ನೀಡುವ ತೆರಿಗೆ ಹಣ ನೀಡುವಾಗ ಸಮಾನ ನ್ಯಾಯ ಪಾಲನೆಯಾಗಬೇಕು.
ಫಾಜಿಲ್, ಮಸೂದ್ ರೀತಿಯೇ ಪ್ರವೀಣ್ ಮನೆಗೂ ಅವಕಾಶ ನೀಡಿದರೆ ಪರಿಹಾರವನ್ನು ನೀಡುತ್ತೇವೆ. ಕೋಮು ವೈಷಮ್ಯದಿಂದ ಅಮಾಯಕರು ಬಲಿಯಾಗುವುದು ನಿಲ್ಲಬೇಕು. ಕರಾವಳಿಯಲ್ಲಿ ಸಹೋದರತ್ವ, ಭ್ರಾತೃತ್ವ ಬೆಳೆಯಬೇಕು ಎಂದು ಹೇಳಿದ್ದಾರೆ.

ಈ ಸಂದರ್ಭ ಫಾಜಿಲ್ ತಂದೆ ಉಮರ್ ಫಾರೂಕ್ ಮಾತನಾಡಿ, "ಈ ನಿಧಿಯನ್ನು ಟ್ರಸ್ಟ್ ಮೂಲಕ ಸದ್ವಿನಿಯೋಗಿಸಲು ತೀರ್ಮಾನಿಸಿದ್ದೇನೆ. ಫಾಜಿಲ್ ಬದುಕಿದ್ದಾಗಲೂ ರಕ್ತದಾನ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದ. ಮುಂದೆ ಅವನ ನೆನಪಲ್ಲಿ ಈ ಹಣ ದಿಂದ ಸಮಾಜ ಕಾರ್ಯ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.












Click it and Unblock the Notifications