ದೀಪಕ್ ರಾವ್ ಹತ್ಯೆ; ಪ್ರಮುಖ ಆರೋಪಿ ಕೊಲೆಗೆ ಯತ್ನ
ಮಂಗಳೂರು, ಫೆಬ್ರವರಿ 11: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವಾಝ್ ಹತ್ಯೆಯತ್ನ ನಡೆದಿದೆ. ಈ ಘಟನೆ ಬಳಿಕ ಕಾಟಿಪಳ್ಳ, ಕೃಷ್ಣಾಪುರದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.
ನವಾಝ್ ಅಲಿಯಾಸ್ ಪಿಂಕಿ ನವಾಝ್ (26) ಕೊಲೆಗೆ ಆತನ ಸಹಚರರೇ ಪ್ರಯತ್ನ ನಡೆಸಿದ್ದಾರೆ. ಕಾಟಿಪಳ್ಳ ನಿವಾಸಿ ನವಾಝ್ನನ್ನು ಕಾಟಿಪಳ್ಳ ಮೈದಾನದ ಬಳಿ ಬರಲು ಹೇಳಿದ ಶಾಕಿಬ್ ಮತ್ತು ನಾಲ್ವರ ತಂಡ ದಾಳಿ ನಡೆಸಿ ಹತ್ಯೆ ಮಾಡಲು ಯತ್ನ ಮಾಡಿದೆ.
2018ರ ಜನವರಿ 3ರಂದು ಮೊಬೈಲ್ ಕಂಪನಿಯೊಂದರ ಎಕ್ಸಿಕ್ಯೂಟಿವ್, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಮಾಡಲಾಗಿತ್ತು. ಪಿಂಕಿ ನವಾಝ್ ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈ ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

ಪಿಂಕಿ ನವಾಝ್ ಹತ್ಯೆ ಯತ್ನದ ಬಗ್ಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. "ಸಿಫ್ಟ್ ಕಾರಿನಲ್ಲಿ ಆಗಮಿಸಿದ್ದ ತಂಡ ಹತ್ಯೆಗೆ ಪ್ರಯತ್ನ ಮಾಡಿದೆ. ಮೈದಾನದಲ್ಲಿ ಆಟವಾಡುತ್ತಿದ್ದವರು ಇದನ್ನು ಗಮನಿಸಿ, ಕಲ್ಲು ತೂರಿ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ" ಎಂದು ಹೇಳಿದ್ದಾರೆ.
ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡಿರುವ ಪಿಂಕಿ ನವಾಝ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಕಾಟಿಪಳ್ಳ, ಕೃಷ್ಣಾಪುರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಪಿಂಕಿ ನವಾಝ್ ಹತ್ಯೆಗೆ ಪ್ರಯತ್ನ ನಡೆಸಿದ ಶಾಕಿಬ್ ಸಹ ದೀಪಕ್ ರಾವ್ ಹತ್ಯೆ ಪ್ರಕರಣದ ಆರೋಪಿ. ಎಲ್ಲರೂ ಒಂದೇ ತಂಡದವರಾಗಿದ್ದು, ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.
ಅಕ್ರಮ ಸಂಬಂಧ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಂಕಿ ನವಾಝ್ ರೌಡಿ ಶೀಟರ್ ಆಗಿದ್ದು, ದೀಪಕ್ ರಾವ್ ಹತ್ಯೆ ನಡೆದ ದಿನವೇ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.
ಪಿಂಕಿ ನವಾಝ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆಯತ್ನ ಪ್ರಕರಣದ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.












Click it and Unblock the Notifications