ಮಂಗಳೂರು ನಗರದಲ್ಲಿ ಮತ್ತಷ್ಟು ಸಿಗ್ನಲ್ ವ್ಯವಸ್ಥೆ
ಮಂಗಳೂರು, ಜ.28 : ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದರೂ ರಸ್ತೆಗಳು ಅಗಲಗೊಳ್ಳದೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಸಂಚಾರ ಪೊಲೀಸರು 4 ಹೊಸ ಸಿಗ್ನಲ್ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 10 ಜಂಕ್ಷನ್ಗಳಲ್ಲಿ ಸಿಗ್ನಲ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದ್ದಾರೆ.
ಸಂಚಾರ ವಿಭಾಗದ ಎಸಿಪಿ ಉದಯ ನಾಯಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಲ್ಮಠದ ವಾಸ್ ಬೇಕರಿ ಬಳಿ, ಬೆಂದೂರ್ವೆಲ್ ವೃತ್ತ, ಬೆಂದೂರ್ನ ತೋಟಗಾರಿಕೆ ಇಲಾಖೆ ಕಚೇರಿ ಬಳಿ ಮತ್ತು ಕೆಎಸ್ಆರ್ಟಿ ವೃತ್ತದಲ್ಲಿ ಹೊಸ ಸಿಗ್ನಲ್ಗಳನ್ನು ಅಳವಡಿಸಲಾಗುತ್ತಿದೆ ಎಂದರು. [ವಾಹನಕ್ಕೆ ಸುಲಭವಾಗಿ ಫ್ಯಾನ್ಸಿ ನಂಬರ್ ಪಡೆಯಿರಿ]

ಒಂದು ವಾರದೊಳಗೆ ಎಲ್ಲಾ 4 ಸಿಗ್ನಲ್ ಅಳವಡಿಸುವ ಕಾಮಗಾರಿಯನ್ನು ಮುಗಿಸಲಾಗುತ್ತದೆ. ಬಂಟ್ಸ್ ಹಾಸ್ಟೆಲ್- ಜ್ಯೋತಿ ವೃತ್ತ ಕಾಂಕ್ರಿಟ್ ಕಾಮಗಾರಿ ಮುಗಿದು ಸಂಚಾರ ಆರಂಭಗೊಳ್ಳುತ್ತಿದ್ದಂತೆ, ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ನಲ್ಲಿ ನಿರ್ಮಿಸಿರುವ ಹೊಸ ಡಿಜಿಟಲ್ ಸಿಗ್ನಲ್ ಕಾರ್ಯಾರಂಭ ಮಾಡಿ, ಸಂಚಾರ ನಿಯಂತ್ರಿಸಲಿದೆ. ಸಿಗ್ನಲ್ಗಳನ್ನು ಮೂರು ವರ್ಷ ಕಾಲ ಭಾರತ್ ಎಲೆಕ್ಟ್ರಾನಿಕ್ ನಿರ್ವಹಣೆ ಮಾಡಲಿದೆ ಎಂದು ಹೇಳಿದರು. [ಡಿಎಲ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಹಾಕಿ]
ಮತ್ತಷ್ಟು ಸಿಗ್ನಲ್ : ಮುಂದಿನ ದಿನಗಳಲ್ಲಿ ಕಂಕನಾಡಿಯ ಕರಾವಳಿ ವೃತ್ತ, ಹಂಪನಕಟ್ಟೆ, ಅಂಬೇಡ್ಕರ್(ಜ್ಯೋತಿ), ಬಂಟ್ಸ್ ಹಾಸ್ಟೆಲ್ ಮತ್ತು ಪಿವಿಎಸ್ ವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗುತ್ತದೆ. ಕರಾವಳಿ ವೃತ್ತದಲ್ಲಿ 5 ವರ್ಷದ ಹಿಂದೆ ಕಂಬ ಹಾಕಲಾಗಿತ್ತು. ಇದೀಗ ಅದನ್ನು ತೆಗೆದು ಹೊಸ ವ್ಯವಸ್ಥೆಯಡಿ ಅಳವಡಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

ಮಂಗಳೂರು ನಗರದ ಸಂಚಾರಿ ವ್ಯವಸ್ಥೆ ಸುಧಾರಣೆಗೆ ರಾಜ್ಯ ಸರ್ಕಾರ 5 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಅದರಲ್ಲಿ 1.25 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ಸಿಗ್ನಲ್ ಅಳವಡಿಸಲಾಗುತ್ತಿದೆ ಎಂದು ಉದಯ ನಾಯಕ್ ತಿಳಿಸಿದರು.












Click it and Unblock the Notifications