ದಕ್ಷಿಣ ಕನ್ನಡ; ಬಂಟ್ವಾಳದಲ್ಲಿ ನೈತಿಕ ಪೊಲೀಸ್ ಗಿರಿ, ಮೂವರ ಬಂಧನ
ಮಂಗಳೂರು, ಆಗಸ್ಟ್ 27; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಘಟನೆ ನಡೆದಿದೆ. ಮಂಗಳೂರಿನ ಕಾಲೇಜೊಂದರ ಅನ್ಯ ಕೋಮಿನ ವಿದ್ಯಾರ್ಥಿಗಳ ಜೊತೆ, ಇನ್ನೊಂದು ಕೋಮಿನ ವಿದ್ಯಾರ್ಥಿನಿಯರು ಗುಡ್ಡದಲ್ಲಿರುವ ದೇವಾಲಯಕ್ಕೆ ಸಂಜೆಯ ಹೊತ್ತು ಪ್ರವಾಸಕ್ಕೆಂದು ಹೋಗಿದ್ದರು.
ಈ ವೇಳೆ ವಿದ್ಯಾರ್ಥಿಗಳನ್ನು ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ತಡೆದು ಅನ್ಯ ಕೋಮಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಜಿನ ಕಾರಿಂಜ ಎಂಬಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಐವರ ವಿರುದ್ದ ವಿದ್ಯಾರ್ಥಿನಿ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಎಲ್ಲರೂ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ವಿಧ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಾಗಿದ್ದು, ಮೂವರು ಅನ್ಯ ಕೋಮಿನ ವಿದ್ಯಾರ್ಥಿಗಳ ಜೊತೆ ಮೂವರು ವಿದ್ಯಾರ್ಥಿನಿಯರು ಮಂಗಳೂರಿನಿಂದ ಬೈಕ್ನಲ್ಲಿ ಕಾರಿಂಜ ದೇವಾಲಯಕ್ಕೆ ಪ್ರವಾಸಕ್ಕೆಂದು ಬಂದಿದ್ದರು.
ಬಂಟ್ವಾಳ ದ ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಾಲಯ ಇದಾಗಿದ್ದು, ಗುಡ್ಡದ ಮೇಲೆ ಪೃಕೃತಿ ಸೌಂದರ್ಯದ ನಡುವೆ ಇರೋದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಮಂಗಳೂರಿನ ಈ ಆರು ಮಂದಿ ವಿದ್ಯಾರ್ಥಿಗಳೂ ದೇವಾಲಯಕ್ಕೆ ಪ್ರವಾಸ ಬಂದಿದ್ದು, ದೇವಾಲಯ, ಗುಡ್ಡ, ಬೆಟ್ಟ ಸುತ್ತಾಡಿ ಮರಳಿ ಕೆಳಗಿಳಿಯುವ ವೇಳೆ ಅಡ್ಡಗಟ್ಟಿದ ಹಿಂದೂ ಸಂಘಟನೆಯ ಯುವಕರು ಪ್ರಶ್ನಿಸಿದ್ದಾರೆ. ಅನ್ಯ ಕೋಮಿನ ಯುವಕರ ಮೇಲೆ ದಾಳಿ ಮಾಡಿದ್ದಾರೆ ಎಂಬುದು ಆರೋಪ.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿರುವ ವಿದ್ಯಾರ್ಥಿನಿ, ಆಗಸ್ಟ್ 26ರಂದು ಮಂಗಳೂರಿನಿಂದ ಮೂರು ಬೈಕ್ನಲ್ಲಿ ಆರು ಮಂದಿ ಸ್ನೇಹಿತರು ಬಂಟ್ವಾಳದ ಕಾರಿಂಜೇಶ್ವರ ದೇವಾಲಯಕ್ಕೆ ತೆರಳಿದ್ದೆವು. ಕಾರಿಂಜೇಶ್ವರ ಬೆಟ್ಟಕ್ಕೆ ಹತ್ತಿ, ಸುತ್ತಾಡಿ, ಫೋಟೋ ತೆಗೆದು ಸಂಜೆ ಆರು ಗಂಟೆಯ ವೇಳೆಗೆ ಬೆಟ್ಟದ ಕೆಳಗಿರುವ ಕೆರೆಯ ಸಮೀಪಕ್ಕೆ ಬಂದಿದ್ದೇವೆ.

ಆಗ ಅಲ್ಲಿಗೆ ಬಂದ 5 ಮಂದಿ ಅಪರಿಚಿತರ ತಂಡ ನಮ್ಮನ್ನು ತಡೆದಿದೆ. ನಮ್ಮ ಬಗ್ಗೆ ವಿಚಾರಿಸಿದೆ. ನಾವು ಅನ್ಯ ಕೋಮಿನ ಯುವಕರ ಜೊತೆ ಬಂದಿರೋದಕ್ಕೆ ಅಶ್ಲೀಲ ಶಬ್ಧಗಳಿಂದ ಬೈದು ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ ನಮ್ಮ ಜೊತೆ ಬಂದಿದ್ದ ಯುವಕರಿಗೆ ಹಲ್ಲೆ ಮಾಡಿದ್ದಾರೆ ಅಂತಾ ವಿದ್ಯಾರ್ಥಿನಿ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇನ್ನು ಈ ಬಗ್ಗೆ ಸ್ಥಳೀಯ ಹಿಂದೂ ಸಂಘಟನೆಯ ಮುಖಂಡರು ಪ್ರತಿಕ್ರಿಯಿಸಿದ್ದು, ಕಾರಿಂಜೇಶ್ವರ ದೇವಾಲಯದ ಗುಡ್ಡಕ್ಕೆ ಭಕ್ತರ ಸೋಗಿನಲ್ಲಿ ವಿದ್ಯಾರ್ಥಿಗಳು ಆಗಮಿಸಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಾರೆ. ಗುರುವಾರ ಸಂಜೆಯ ವೇಳೆಗೆ ಮೂರು ಯುವಕರ ಜೊತೆ ಮೂರು ಯುವತಿಯರು ಆಗಮಿಸಿದ್ದು, ಫೋಟೋಗಳನ್ನು ತೆಗೆಯುತ್ತಾ ಅಸಭ್ಯವಾಗಿ, ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವಂತೆ ವರ್ತಿಸುತ್ತಿದ್ದರು. ಅವರನ್ನು ತಡೆಹಿಡಿದು ಮಾಹಿತಿ ಕೇಳಿ, ಪೂಂಜಾಲಕಟ್ಟೆ ಠಾಣಾ ಪೊಲೀಸರ ಗಮನಕ್ಕೆ ತಂದಿದ್ದೇವೆ. ಯಾವುದೇ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ವಿದ್ಯಾರ್ಥಿನಿಯ ದೂರಿನ ಅನುಸಾರವಾಗಿ ತನಿಖೆ ನಡೆಸಿ ಮೂರು ಮಂದಿ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ. ಈ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 143,147,341ಮತ್ತು 149 ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನು ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ತೀವ್ರ ನಡೆಯುತ್ತಿದೆ. ಕೆಲವರು ಮೈಸೂರು ಘಟನೆ ಕಣ್ಣಮುಂದೆ ಇರುವಾಗ ಯುವತಿಯರು ಸಂಜೆ ಹೊತ್ತು ಬಂದಿರೋದು ತಪ್ಪು, ಪ್ರವಾಸಕ್ಕೆ ಹೋಗುತ್ತಿರುವ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರಾ? ಅಂತಾ ಪ್ರಶ್ನೆ ಎತ್ತಿದ್ದಾರೆ.
ಅದೇನೇ ಆದರೂ ಪೂಂಜಾಲಕಟ್ಟೆ ಪೊಲೀಸರು ಈ ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ನಿಜವಾದ ತಪ್ಪಿದಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.












Click it and Unblock the Notifications