ಮೂಡಬಿದಿರೆಯಲ್ಲಿ ಬೆಳ್ಳಂಬೆಳಗ್ಗೆ ಹೂವಿನ ವ್ಯಾಪಾರಿ ಹತ್ಯೆ
ಮೂಡಬಿದಿರೆ, ಅಕ್ಟೋಬರ್ 09 : ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹೂವಿನ ವ್ಯಾಪಾರಿಯನ್ನು ದುಷ್ಕರ್ಮಿಗಳ ತಂಡ ಹತ್ಯೆ ಮಾಡಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಈ ಹತ್ಯೆಯಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಮೂಡಬಿದಿದೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮೂಡಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ಬಳಿಯಿರುವ ಹೂವಿನ ಅಂಗಡಿ ನಡೆಸುತ್ತಿದ್ದ ಹೊಸಬೆಟ್ಟು ಗ್ರಾಮದ ನಿವಾಸಿ ಪ್ರಶಾಂತ್ (29) ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಹತ್ಯೆಯ ಬಳಿಕ ಮೂಡಬಿದರೆಯಲ್ಲಿ ಅಘೋಷಿತ ಬಂದ್ ವಾರಾವರಣ ನಿರ್ಮಾಣವಾಗಿದೆ. [ಮೂಡಬಿದಿರೆ : ಕಳುವಾಗಿದ್ದ ಮೂರ್ತಿಗಳು ಮಠಕ್ಕೆ ವಾಪಸ್]

ಬೆಳಗ್ಗೆ 7 ಗಂಟೆ ಸುಮಾರಿಗೆ ಪ್ರಶಾಂತ್ ಎಂದಿನಂತೆ ಹೂವುಗಳನ್ನು ತಮ್ಮ ಅಂಗಡಿಗೆ ತರುವಾಗ, ಪಕ್ಕದಲ್ಲಿರುವ ಆಟೋ ನಿಲ್ದಾಣದ ಹಿಂಭಾಗ ಅಡಗಿ ಕೂತಿದ್ದ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಪ್ರಶಾಂತ್ ಮೇಲೆ ಹಲ್ಲೆ ಮಾಡಿದೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. [ಚಿತ್ರಗಳು : ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ]
ಪ್ರಶಾಂತ್ ಅವರ ಹತ್ಯೆಯ ಬಳಿಕ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೆಲವು ವ್ಯಾಪಾರಿಗಳು ಸ್ವಯಂ ಪ್ರೇತಿರವಾಗಿ ಅಂಗಡಿಗಳನ್ನು ಮುಚ್ಚಿದರು. ವಾರದ ಸಂತೆಯ ಮೇಲೆಯೂ ಇದು ಪರಿಣಾಮ ಬೀರಿದ್ದು, ವ್ಯಾಪಾರ ಕಡಿಮೆಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮೂಡಬಿದಿರೆ ಪೊಲೀಸರು ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಪ್ರಶಾಂತ್ ಹತ್ಯೆ ಪ್ರಕರಣವನ್ನು ಮೂಡಬಿದಿರೆ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications