ಕರಾವಳಿ ತೀರದಲ್ಲಿ 57 ದಿನ ಮೀನುಗಾರಿಕೆ ನಿಷೇಧ
ಮಂಗಳೂರು, ಜೂ.13 : ಮುಂಗಾರು ಆರಂಭವಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಸೇರಿದಂತೆ ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಜೂ. 15 ರಿಂದ ಆಗಸ್ಟ್ 10ರವರೆಗೆ ಒಟ್ಟು 57 ದಿನಗಳ ನಿಷೇಧ ಜಾರಿಯಲ್ಲಿರುತ್ತದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮೀನುಗಾರಿಕಾ ಉಪ ನಿರ್ದೇಶಕರು, ಯಾವುದೇ ಬಲೆ, ಸಾಧನಗಳನ್ನು ಉಪಯೋಗಿಸಿ ಮತ್ತು ಯಾಂತ್ರಿಕ ಅಥವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕ ಕರಾವಳಿ ತೀರದಲ್ಲಿ ಮೀನುಗಾರಿಕೆಯನ್ನು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಮುಂಗಾರು ಆರಂಭವಾದ ಹಿನ್ನಲೆಯಲ್ಲಿ ಈ ಆದೇಶ ನೀಡಲಾಗಿದ್ದು, ಜೂ.15 ರಿಂದ ಆಗಸ್ಟ್ 10 ನೇ ದಿನಾಂಕದವರೆಗೆ ಅಂದರೆ ಒಟ್ಟು 57 ದಿನಗಳವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಮೀನುಗಾರಿಕೆ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. [ಮಂಗಳೂರಿನ ಮಳೆಯ ಚಿತ್ರಗಳು]
ಎಲ್ಲ ಯಾಂತ್ರೀಕೃತ ದೋಣಿ ಮೀನುಗಾರರು ಕಡ್ಡಾಯವಾಗಿ ಈ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಸೂಚನೆಗಳನ್ನು ಉಲ್ಲಂಘಿಸಿ ಹಾಗೂ ನಿಷೇಧಾಜ್ಞೆಯನ್ನು ಮೀರಿ ಈ ಅವಧಿಯಲ್ಲಿ ಮೀನುಗಾರಿಕೆಯನ್ನು ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪರಿಹಾರ ನೀಡುವುದಿಲ್ಲ : ಈ ನಿಷೇಧಾಜ್ಞೆಯನ್ನು ಮೀರಿ ಮೀನುಗಾರಿಕೆ ಮಾಡಲು ಸಮುದ್ರಕ್ಕೆ ಇಳಿದು ಅನಾಹುತ ಸಂಭವಿಸಿದರೆ, ಅದಕ್ಕೆ ಮೀನುಗಾರರು ಜವಾಬ್ದಾರರಾಗಿರುತ್ತಾರೆ ಮತ್ತು ಈ ಬಗ್ಗೆ ಸರ್ಕಾರದಿಂದ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications