ಮಾತೆ ಮೇರಿಯ ಜಾಗದಲ್ಲಿ ಕೊರಗಜ್ಜನ ಮೂರ್ತಿಯಿಟ್ಟ ಕಿಡಿಗೇಡಿಗಳು
ಮಂಗಳೂರು, ಸೆಪ್ಟೆಂಬರ್. 28: ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳಕ್ಕೆ ದುಷ್ಕರ್ಮಿಗಳು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ ಘಟನೆ ಬಂಟ್ವಾಳ ತಾಲೂಕಿನ ಕುಂಟ್ರಕಳ ಎಂಬಲ್ಲಿ ನಡೆದಿದೆ.
ಕಳೆದ 45 ವರ್ಷಗಳಿಂದ ಕ್ರೈಸ್ತರು ಕುಂಟ್ರಕಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಿದ್ದರು. ಮೇರಿಯ ಮೂರ್ತಿಯನ್ನಿಟ್ಟ ಸ್ಥಳ ಸರ್ಕಾರಿ ಜಾಗವಾದ ಕಾರಣ ಅಲ್ಲಿ ಮೇರಿ ಆರಾಧನೆ ಬಗ್ಗೆ ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು ಎಂದು ಹೇಳಲಾಗಿದೆ.
ಆದರೆ ನಿನ್ನೆ (ಸೆ.28) ಮಧ್ಯರಾತ್ರಿ ಏಕಾಏಕಿ ಸ್ಥಳಕ್ಕೆ ನುಗ್ಗಿದ ಕಿಡಿಗೇಡಿಗಳ ತಂಡ ಮೇರಿ ಮೂರ್ತಿ ಇದ್ದ ಪ್ರದೇಶದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿದ್ದು, ಸುತ್ತಲೂ ಕೇಸರಿ ಬಂಟಿಂಗ್ಸ್ ಕಟ್ಟಿದ್ದಾರೆ.

ವಿಷಯ ಬಹಿರಂಗವಾಗುತ್ತಿದ್ದಂತೆಯೇ ಇಂದು ಶುಕ್ರವಾರ ಮುಂಜಾನೆ ಹಿಂದೂ, ಕ್ರೈಸ್ತ ಸಮುದಾಯದ ಯುವಕರ ಗುಂಪು ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಕಾಂತೇಗೌಡ ಗುಂಪು ಚದುರಿಸಿದರು. ಬಂಟ್ವಾಳ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ಶೋಧ ಆರಂಭವಾಗಿದೆ.












Click it and Unblock the Notifications