ಅವಳಿ ದೈವಗಳ ಪವಾಡ:ಪಾಪೆಮಜಲು ಕೋಟಿ-ಚೆನ್ನಯ ಗರಡಿ ಬಳಿ ಚಿಮ್ಮಿದ ನೀರು!
ಮಂಗಳೂರು, ಜನವರಿ 17: ತುಳುನಾಡು ದೈವಗಳ ನೆಲೆಬೀಡು ಎಂದೇ ಪ್ರಖ್ಯಾತಿ ಪಡೆದ ಪ್ರದೇಶ. ಇಲ್ಲಿ ಒಂದಲ್ಲ ಒಂದು ವಿಸ್ಮಯಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇವೆಲ್ಲ ತುಳುನಾಡನ್ನು ಕಾಯುವ ದೈವಗಳ ಶಕ್ತಿ ಎಂದೇ ಜನರ ನಂಬಿಕೆ. ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಪೆಮಜಲು ಕೋಟಿ-ಚೆನ್ನಯ ಗರಡಿಯಲ್ಲಿ ವಿಸ್ಮಯವೊಂದು ಬೆಳಕಿಗೆ ಬಂದಿದೆ.
ಹೌದು, ತುಳುನಾಡಿನ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯ ಗರಡಿ ಇರುವ ಸ್ಥಳದಲ್ಲಿ ನೀರಿನ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗರಡಿಯ ಉಸ್ತುವಾರಿಗಳು ಕಳೆದ ಬಾರಿ ನಡೆದ ಭೂತಗಳ ನರ್ತನದ ಸಮಯದಲ್ಲಿ ಈ ದೈವಗಳ ಮುಂದೆ ನೀರಿನ ಸಮಸ್ಯೆಯ ಬಗ್ಗೆ ಅರುಹಿದ್ದರು.

ಆ ಸಂದರ್ಭದಲ್ಲಿ ಅವಳಿ ದೈವಗಳು ತಮ್ಮ ಆಯುಧವಾದ ಸುರ್ಯದಲ್ಲಿ ಗರಡಿಯ ಆವರಣದಲ್ಲಿದ್ದ ಸ್ಥಳದಲ್ಲಿ ಗುರುತು ಹಾಕಿ ಅದೇ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯುವಂತೆ ಸೂಚಿಸಿದ್ದವು. ಅದರಂತೆ ಎರಡು ದಿನಗಳ ಹಿಂದೆ ದೈವಗಳು ಸೂಚಿಸಿದ ಸ್ಥಳದಲ್ಲೇ ಕೊಳವೆ ಬಾವಿ ಕೊರೆಯುವ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ.

ಕೊಳವೆ ಬಾವಿ ಕೊರೆಯುವ ಸಂದರ್ಭ ವಿವಿಧ ವೈಜ್ಞಾನಿಕ ವಿಧಾನ ಅನುಸರಿಸಬೇಕಾದ ಈ ಕಾಲಘಟ್ಟದಲ್ಲಿ ದೈವಗಳು ಕೇವಲ ತನ್ನ ಆಯುಧಗಳಿಂದ ಸೂಚಿಸಿದ ಸ್ಥಳದಲ್ಲಿ ಅಗಾಧ ಪ್ರಮಾಣದ ನೀರು ಸಿಕ್ಕಿರುವುದು ದೈವದ ಇರುವಿಕೆಗೆ ಸಾಕ್ಷಿ ಎನ್ನುವ ಅಭಿಪ್ರಾಯಗಳು ಇದೀಗ ಹರಿದಾಡಲಾರಂಭಿಸಿದೆ.












Click it and Unblock the Notifications