ಮಂಗಳೂರು : ಅಕ್ರಮ ಜಾಹೀರಾತುಗಳ ಎತ್ತಂಗಡಿ
ಮಂಗಳೂರು, ಮಾ. 31 : ಮಂಗಳೂರು ಮಹಾನಗರ ಪಾಲಿಕೆ ಅಕ್ರಮ ಜಾಹೀರಾತು ಫಲಕಗಳ ವಿರುದ್ಧ ಸಮರ ಸಾರಿದೆ. ನಗರದಲ್ಲಿರುವ ಅಕ್ರಮ ಫಲಕಗಳನ್ನು ತೆರವುಗೊಳಿಸುವಂತೆ ಮೇಯರ್ ಜೆಸಿಂತಾ ವಿಜಯ ಅಲ್ರೆಡ್ ಆದೇಶ ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಅಕ್ರಮ ಜಾಹೀರಾತು ಫಲಕಗಳ ಬಗ್ಗೆ ಚರ್ಚೆ ನಡೆಯಿತು. ಅಕ್ರಮವಾಗಿ ಫಲಕಗಳನ್ನು ಹಾಕಿರುವುದಿಂದ ನಗರದ ಸೌಂದರ್ಯ ಹಾಳಾಗುತ್ತಿದೆ, ಅವುಗಳಿಂದ ಆದಾಯವೂ ಬರುತ್ತಿಲಲ್ಲ ಆದ್ದರಿಂದ ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಮೇಯರ್ ನಿರ್ದೇಶನ ನೀಡಿದರು.
19 ಅಲ್ಲ 36 ಅಕ್ರಮ ಫಲಕಗಳಿವೆ : ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸುರೇಶ್ ಶೆಟ್ಟಿ ಅವರು, ಪಾವಂಜೆಯಿಂದ ಕೆಪಿಟಿ ಹಾಗೂ ಕೆಪಿಟಿಯಿಂದ ಏರ್ಪೋರ್ಟ್ ರಸ್ತೆಯಲ್ಲಿ ತಾವು ಖುದ್ದಾಗಿ ಸಮೀಕ್ಷೆ ನಡೆಸಿದ್ದು, ಈ ಮಾರ್ಗದಲ್ಲಿ 36 ಅನಧಿಕೃತ ಜಾಹೀರಾತು ಫಲಕಗಳಿವೆ ಎಂದು ಚಿತ್ರ ಸಹಿತ ಸಭೆಗೆ ವಿವರ ನೀಡಿದರು. [ಮಂಗಳೂರು ಪಾಲಿಕೆ ಬಜೆಟ್ ಮುಖ್ಯಾಂಶಗಳು]

ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 19 ಅನಧಿಕೃತ ಫಲಕಗಳಿವೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೇವಲ ಎರಡು ರಸ್ತೆಯಲ್ಲಿ 36 ಫಲಕಗಳಿದ್ದರೆ ನಗರದ ಉಳಿದ ಪ್ರದೇಶಗಳಲ್ಲಿ ಎಷ್ಟಿರಬಹುದು? ಕೂಡಲೇ ತೆರವುಗೊಳಿಸಬೇಕು ಎಂದು ಪ್ರತಿಪಕ್ಷದವರು ಒತ್ತಾಯಿಸಿದರು. [ಜಾಹೀರಾತು ಫಲಕಗಳ ವಿರುದ್ಧ ಬಿಬಿಎಂಪಿ ಸಮರ]
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಅವರು ಮಾತನಾಡಿ, ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಪ್ರಯತ್ನ ನಡೆದಿದೆ. ಅಧಿಕೃತ ಹಾಗೂ ಅನಧಿಕೃತ ಎಂದು ಪಟ್ಟಿ ಮಾಡಿ ಒಂದು ವಾರದೊಳಗೆ ತೆರವುಗೊಳಿಸಲಾಗುತ್ತದೆ ಎಂದು ಭರವನೆ ನೀಡಿದರು.
ಪುರಭವನದ ಕಾಮಗಾರಿ ಶೀಘ್ರ ಪೂರ್ಣ : ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಪುರಭವನ ಬಂದ್ ಆಗಿದೆ. ಇದರಿಂದ ಪಾಲಿಕೆ ಆದಾಯ ಖೋತಾ ಆಗಿರುವ ಜೊತೆಗೆ ಕಲಾ ಪ್ರದರ್ಶನಕ್ಕೆ ಅವಕಾಶವಿಲ್ಲದಂತಾಗಿದೆ ಎಂದು ಚರ್ಚೆ ನಡೆಯಿತು. ಶೀಘ್ರವೇ ಉಪ ಗುತ್ತಿಗೆ ಕರೆದು ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಮೇಯರ್ ಹೇಳಿದರು.












Click it and Unblock the Notifications