ಕೆಥೋಲಿಕ್ ಕ್ಯಾರಿಸ್ಮಾಟಿಕ್ ಧ್ಯಾನಕೂಟಕ್ಕೆ ಚಾಲನೆ
ಮಂಗಳೂರು, ಆ.07 : ಕೆಥೋಲಿಕ್ ಕ್ಯಾರಿಸ್ಮಾಟಿಕ್ ಧ್ಯಾನಕೂಟ 'ಪವಿತ್ರಾತ್ಮ ಅಭಿಷೇಕೋತ್ಸವ-2017' ನವೆಂಬರ್ ನಲ್ಲಿ ನಡೆಯಲಿದೆ. ಧ್ಯಾನಕೂಟದ ಲಾಂಛನವನ್ನು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ಬಿಡುಗಡೆ ಮಾಡಿದರು.
ನವೆಂಬರ್ 9 ರಿಂದ 12 ರ ತನಕ ನಾಲ್ಕು ದಿನಗಳ ಕಾಲ ಮಂಗಳೂರಿನ ರೊಜಾರಿಯೋ ಕೆಥೆಡ್ರಲ್ ನಲ್ಲಿ ನಡೆಯಲಿರುವ ಕೆಥೋಲಿಕ್ ಕ್ಯಾರಿಸ್ಮಾಟಿಕ್ ಧ್ಯಾನಕೂಟಕ್ಕೆ ಲಾಂಛನ ಬಿಡುಗಡೆ ಮೂಲಕ ಚಾಲನೆ ನೀಡಲಾಗಿದೆ.
ನಗರದ ರೊಜಾರಿಯೋ ಕೆಥೆಡ್ರಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ 14 ಧರ್ಮ ಪ್ರಾಂತಗಳ 500 ಮಂದಿಗೆ ತರಬೇತಿ ನೀಡಲಾಗುವುದು. ಸಂಜೆ 4ರಿಂದ 8ರ ತನಕ ದ್ಯಾನ ಕೂಟ ಜರಗಲಿದ್ದು, ಪ್ರತಿದಿನ ಸುಮಾರು 10,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮಂಗಳೂರಿನ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಮಾತನಾಡಿ, 'ರಾಜ್ಯದ ಎಲ್ಲ ಬಿಷಪರು ಈ ಕಾರ್ಯಕ್ರದಲ್ಲಿ ಪಾಲ್ಗೊಳ್ಳುವರು. ಆಧ್ಯಾತ್ಮಿಕ ನವೀಕರಣ ಬಯಸುವ ಕ್ರೈಸ್ತರಿಗೆ ಈ ಧ್ಯಾನ ಕೂಟ ಸಹಾಯಕವಾಗಲಿದೆ' ಎಂದರು.
ಧ್ಯಾನಕೂಟ ಸಂಚಾಲಕ ಫಾ. ಒನಿಲ್ ಡಿಸೋಜಾ ಪ್ರಸ್ತಾವಿಕವಾಗಿ ಮಾತನಾಡಿ, 'ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ಧರ್ಮ ಪ್ರಾಂತದ ಎಲ್ಲ 117 ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗಳು ಇಂದಿನಿಂದಲೇ ಆರಂಭವಾಗಿದೆ' ಎಂದರು.