ಮಂಗಳೂರು : ಸೆಂಟ್ರಲ್ ಮಾರ್ಕೆಟ್ನಲ್ಲಿ ನಡೆದ ಕೊಲೆ ರಹಸ್ಯ ಬಹಿರಂಗ
ಮಂಗಳೂರು, ಮಾರ್ಚ್ 21 : ನಗರದ ಸೆಂಟ್ರಲ್ ಮಾರ್ಕೆಟ್ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫೆ. 29ರಂದು ಜಯಾನಂದ ಎಂಬುವವರನ್ನು ಮಾರ್ಕೆಟ್ನಲ್ಲಿ ಕೊಲೆ ಮಾಡಲಾಗಿತ್ತು.
ಭಾನುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ ಸಾಲಿಯಾನ್ (35)ಮತ್ತು ದಾವಣಗೆರೆ ನಿವಾಸಿ ನವೀನ (20) ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. [ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 3ನೇ ಸ್ಥಾನ]

ಮದ್ಯ ಕುಡಿಸಿ ಕೊಂದರು : ಸೆಂಟ್ರಲ್ ಮಾರ್ಕೆಟ್ನ ಎಎಸ್ಕೆ ವೆಜ್ ಎಲೈಟ್ ಸೆಂಟರ್ ಬಳಿ ಫೆ. 29ರಂದು ಮೂಡುಶೆಡ್ಡೆ ನಿವಾಸಿ ಜಯಾನಂದ (50)ಎಂಬುವರ ಕೊಲೆ ನಡೆದಿತ್ತು. ಹತ್ಯೆ ನಡೆದ ಐದು ದಿನಗಳ ಬಳಿಕ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿತ್ತು. [ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 'ಕಾಯಕಲ್ಪ' ಪ್ರಶಸ್ತಿ ಗರಿ]
ಕೊಲೆಯಾದ ಜಯಾನಂದ ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳಾದ ನವೀನ್ ಕೂಲಿ ಕೆಲಸ ಮಾಡಿಕೊಂಡಿದ್ದರೆ, ರವೀಂದ್ರ ವೃತ್ತಿಯಲ್ಲಿ ಪೈಂಟರ್ ಆಗಿದ್ದರು. ಮೂವರು ಪರಿಚಿತರಾಗಿದ್ದು, ಇವರು ತಮ್ಮ ಕೆಲಸ ಮುಗಿಸಿ ನಂತರ ಕುಡಿತದ ಅಮಲಿನಲ್ಲಿ ನಗರದೆಲ್ಲೆಡೆ ಓಡಾಡಿಕೊಂಡು ಇರುತ್ತಿದ್ದರು. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಇವರ ನಡುವೆ ಆಗಾಗ ಸಣ್ಣ ಪುಟ್ಟ ಜಗಳ ನಡೆಯುತ್ತಿತ್ತು. ಜಯಾನಂದ ಕೊಲೆಯಾದ ದಿನವೂ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ರವೀಂದ್ರ ಮತ್ತು ನವೀನ್ ಜಯಾನಂದ ಅವರಿಗೆ ಕಂಠಪೂರ್ತಿ ಕುಡಿಸಿ ನಿರ್ಜನ ಪ್ರದೇಶವಾದ ಸೆಂಟ್ರಲ್ ಮಾರ್ಕೆಟ್ಗೆ ಕರೆತಂದು ಅಲ್ಲಿ ಕೊಲೆಗೈದು ಪರಾರಿಯಾಗಿದ್ದರು.












Click it and Unblock the Notifications