ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸಿದ ಮಂಗಳೂರು ಪೊಲೀಸರು
ಮಂಗಳೂರು, ನವೆಂಬರ್. 14:ಮಂಗಳೂರಿನ ಆಭರಣ ಮಳಿಗೆಯೊಂದರ ಮಾಲೀಕರನ್ನು ಅಪಹರಣ ಮಾಡಲು ಸಂಚು ರೂಪಿಸಿದ್ದ ದರೋಡೆಕೋರರ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪಚ್ಚನಾಡಿಯ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ಕೆಲ ಯುವಕರ ತಂಡ ಅಪಹರಣಕ್ಕೆ ಸಂಚು ರೂಪಿಸಿರುವ ಬಗ್ಗೆ ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 11 ಮಂದಿ ಕುಖ್ಯಾತ ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶೇಖ್ ಮಹಮ್ಮದ್ ಅನ್ಸಾರ್(34), ರಮೀಝ್ ಕೆ.ಸಿ.ರೋಡ್(21), ಮಹಮ್ಮದ್ ತೌಸೀಫ್ ಅಲಿಯಾಸ್ ತಚ್ಚು(24), ತೌಸೀಫ್ (25), ಉಬೇದುಲ್ಲಾ(25), ಮಹಮ್ಮದ್ ಅಲಿ(25), ಅಹಮ್ಮದ್ ಕಬೀರ್(30), ಅಸ್ಗರ್ ಅಲಿ ಅಲಿಯಾಸ್ ಅಚ್ಚು (27), ಸಾಬೀತ್(19), ಮಹಮ್ಮದ್ ಸಬಾದ್ ಅಲಿಯಾಸ್ ಸವಾದ್(22), ಅಮೀರ್ ಅಲಿ ಅಲಿಯಾಸ್ ಅಮೀರ್ (19) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 2 ಕಾರು, 3 ಕಬ್ಬಿಣದ ರಾಡ್, 1 ಚೂರಿ, 3 ಮರದ ದೊಣ್ಣೆ, 4 ನಕಲಿ ನಂಬರ್ ಪ್ಲೇಟ್, 16,050 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 3.66ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ಕೇರಳದ ಕಾಸರಗೋಡಿನಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆ ಪ್ರಕರಣ ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.











Click it and Unblock the Notifications