ಮಣಿಯದ ಮಹಿಳೆಯರಿಂದ ವೈನ್ ಶಾಪ್ ವಿರುದ್ಧ ಮತ್ತೆ ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕಲ್ಲುಗುಡ್ಡೆಯಲ್ಲಿ ಸರಕಾರಿ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ತಲೆ ಎತ್ತಿರುವ ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರು ಮತ್ತೆ ಇಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳಾ ಮಣಿಗಳು ಮದ್ಯದಂಗಡಿಗೆ ಪರವಾನಿಗೆ ನೀಡಿದ ಅಬಕಾರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಮೊಳಗಿಸಿದರು. ಒಂದೇ ದಿನದಲ್ಲಿ ಸ್ಥಳ ತನಿಖೆ ನಡೆಸಿ ಪರವಾನಿಗೆ ನೀಡಲು ಮುಂದಾಗುತ್ತಿರುವ ಅಬಕಾರಿ ಇಲಾಖೆಯ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಮದ್ಯ ಸೇವನೆ ವಿರುದ್ಧ ಊರವರು ನೀಡಿದ ದೂರಿಗೆ ಅಬಕಾರಿ ಅಧಿಕಾರಿಗಳು ನಿರ್ಲಕ್ಷ ತೋರಿಸಿದಾಗ ಜನಾಕ್ರೋಶ ಭುಗಿಲೆದ್ದಿತು. ಈ ಸಂದರ್ಭ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಬಿರುಸಿನ ವಾಗ್ವಾದವೂ ನಡೆಯಿತು.
ಸ್ಥಳದಲ್ಲಿ ಅಹಿತಕರ ಘಟನೆಗಳು ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಬೆಳ್ತಂಗಡಿ, ಪುಂಜಾಲಕಟ್ಟೆ, ಧರ್ಮಸ್ಥಳ ಠಾಣೆಯ ಪೊಲೀಸರು ಭಿಗಿ ಭದ್ರತೆ ಕೈಗೊಂಡಿದ್ದರು. ಜಿಲ್ಲಾ ಮೀಸಲು ಪೊಲೀಸ್ ತುಕಡಿ ಹಾಗೂ ಮಹಿಳಾ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿತ್ತು
ಕೆಲವು ದಿನಗಳ ಹಿಂದೆ ಇಲ್ಲೇ ದೊಡ್ಡ ಮಟ್ಟಕ್ಕೆ ಪ್ರತಿಭಟನೆ ನಡೆದು ಅಬಕಾರಿ ಅಧಿಕಾರಿಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಹೀಗಿದ್ದೂ ಮದ್ಯದಂಗಡಿ ಸ್ಥಳಾಂತರವಾಗದ ಹಿನ್ನಲೆಯಲ್ಲಿ ಇಂದು ಮತ್ತೆ ಉಗ್ರ ಪ್ರತಿಭಟನೆ ನಡೆಸಲಾಗಿದೆ. ಈಗಲಾದರೂ ಮದ್ಯದಂಗಡಿ ಸ್ಥಳಾಂತರವಾಗುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications