ಮಂಗಳೂರು- ಮುಂಬೈ ಬಸ್ ಟಿಕೆಟ್ ದರ ಏರಿಕೆ!
ಮಂಗಳೂರು, ಮೇ 13: ಮಂಗಳೂರಿನಿಂದ ಮುಂಬಯಿಗೆ ತೆರಳುವ ಬಸ್ಗಳು ತುಂಬಿ ತುಳುಕುತ್ತಿವೆ. ಒಂದು ಟಿಕೆಟ್ ಪಡೆಯಲು ಭಾರೀ ಬೆವರಳಿಸಬೇಕಾದ ಸ್ಥಿತಿ ಇದೆ. ಜತೆಗೆ ಟಿಕೆಟ್ ದರವು ಹೆಚ್ಚಾಗಿದೆ. ಸಾಮಾನ್ಯವಾಗಿ ಮೇ ಅಂತ್ಯ ಮತ್ತು ಜೂನ್ ಆರಂಭದಲ್ಲಿ ಕಂಡು ಬರುವ ಸ್ಥಿತಿ ಈಗಲೇ ತಲೆದೋರಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮದುವೆ ಸೀಸನ್ ಮುಗಿದಿರುವುದು ಮತ್ತು ಊರಿನಲ್ಲಿ ತಲೆದೋರಿರುವ ನೀರಿನ ಕ್ಷಾಮ .
ಈ ಬಾರಿ ಮೇ. 9ರ ತನಕ ಮದುವೆ ಸೀಜನ್. ಬಳಿಕ ಮುಹೂರ್ತವಿರುವುದು ಎರಡು ಮೂರು ತಿಂಗಳು ಕಳೆದು. ನೆಂಟರಿಷ್ಟರ ಮದುವೆಯಂಥ ಶುಭ ಸಮಾರಂಭಗಳಿಗಾಗಿ ಊರಿಗೆ ಬಂದಿರುವ ಮುಂಬಾಯಿಗರು ನೀರಿನ ಕೊರತೆ, ಅತಿಯಾದ ಸೆಕೆ ಮುಂತಾದವುಗಳಿಂದ ಹಿಂದಿರುಗುತ್ತಿದ್ದಾರೆ. [ಅಪಾರ್ಟ್ಮೆಂಟ್ ನಿವಾಸಿಗಳಿಗೆ 1 ಗಂಟೆ ಮಾತ್ರ ನೀರು]

ಮೊದಲೆಲ್ಲಾ ಮೇ ಕೊನೆಯವರೆಗೂ ಮದುವೆಗಳಿದ್ದವು. ಊರಿಗೆ ಬಂದ ಮುಂಬಾಯಿಗರು ಅಷ್ಟು ದಿನ ಇಲ್ಲಿಯೇ ಇದ್ದು ಮಕ್ಕಳ ಶಾಲೆ ಆರಂಭವಾಗುವ ಹೊತ್ತಿನಲ್ಲಿ , ಅಂದರೆ ಮೇ ಕೊನೆಗೆ ಅಥವಾ ಜೂನ್ ಆರಂಭದಲ್ಲಿ ಹಿಂದಿರುಗುತ್ತಿದ್ದರು. ಪ್ರತಿ ವರ್ಷ ಆ ಸಂದರ್ಭದಲ್ಲಿ ಮುಂಬಯಿ ಬಸ್ಗಳು ಗಿಜಿಗುಟ್ಟುತ್ತಿದ್ದವು. ಈ ಬಾರಿ ಆ ವಾತಾವರಣ ಈಗಲೇ ಕಾಣಿಸಿಕೊಂಡಿದೆ.
ಟಿಕೆಟ್ ದರ ಏರಿಕೆ: ಮುಂಬಯಿಗೆ ತೆರಳುವ ಬಸ್ ನ ಟಿಕೆಟ್ ದರ ಈಗ 1300 ರೂಪಾಯಿ. ಒಂದು ವಾರದಲ್ಲಿ 300 ರೂ. ಏರಿಕೆ ಕಂಡಿದೆ. ಆದರೆ ಮುಂಬಯಿಂದ ಊರಿಗೆ ಬರಲು ಈಗ ಆರಾಮವಾಗಿ ಟಿಕೆಟ್ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್ ದರವು ಕಡಿಮೆ.

ಈ ಬಾರಿ ಹಲಸಿನ ಹಣ್ಣು ಇಲ್ಲ: ಪ್ರತಿವರ್ಷವೂ ಮುಂಬಯಿಗೆ ಹಿಂದಿರುಗುವಾಗ ಹಲಸಿನ ಹಣ್ಣು ಕೊಂಡೊಯ್ಯುತ್ತಿದ್ದವರಿಗೆ ಈ ಬಾರಿ ನಿರಾಸೆಯಾಗಿದೆ. ಊರಿನಲ್ಲಿ ಮಾವು ಹಲಸಿನ ಫಲಗಳು ಕಡಿಮೆ. [ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ]
ಹವಾಮಾನ ವೈಪರೀತ್ಯದಿಂದಾಗಿ ಫಲವಸ್ತುಗಳು ಕಡಿಮೆಯಾಗಿದ್ದು, ಕೆಲವೆಡೆ ತುಂಬಾ ವಿಳಂಬವಾಗಿ ಫಸಲು ಬಂದಿದೆ. ಹಿಂದೆಲ್ಲಾ ಕೆಲವು ಬಸ್ ನ ಸಿಬ್ಬಂದಿಯೂ ಹಲಸಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇಲ್ಲಿ ಬೇಡಿಕೆ ಕಳೆದುಕೊಂಡಿರುವ ಹಲಸಿನ ಹಣ್ಣಿಗೆ ಮುಂಬಯಿಯಲ್ಲಿ ಭರ್ಜರಿ ಡಿಮ್ಯಾಂಡ್.

ಊರಿನಲ್ಲಿ ತೆಂಗಿನ ಕಾಯಿಯೂ ಕಡಿಮೆ ಲಭ್ಯ. ಈ ಬಾರಿ ಬೆಲೆಯೂ ಕಮ್ಮಿ, ಫಸಲು ಕಮ್ಮಿ ಎಂಬಂತಾಗಿದೆ ಇದರಸ್ಥಿತಿ. ಈಗ ಎಲ್ಲಾ ಕಾರಣಗಳಿಂದಾಗಿ ಮುಂಬಯಿಗೆ ಹಿಂದಿರುಗುವವರ ಲಗೇಜ್ ಗಳು ಕಡಿಮೆಯಾಗಿದೆ.












Click it and Unblock the Notifications