97ನೇ ವಯಸ್ಸಿನಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಕರೀಂ ಬ್ಯಾರಿ!
ಮಂಗಳೂರು, ಸೆಪ್ಟೆಂಬರ್, 20: ಕರೀಂ ಬ್ಯಾರಿ ಎಂಬ 97 ವರ್ಷದ ಅಜ್ಜ ತನ್ನ ಸಂಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇವರು ಅಡ್ಡೂರಿನ ಬಳಿ ಫಲ್ಗುಣಿ ನದಿಯಲ್ಲಿ ಅಂಬಿಗನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತನ್ನ 30ನೇ ವರ್ಷದಲ್ಲಿ ಈ ವೃತ್ತಿಯನ್ನು ಆರಂಭಿಸಿದ್ದರು. ಕಳೆದ 67 ವರ್ಷಗಳಿಂದ ಇದೇ ವೃತ್ತಿಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ನೀರಿನ ಜೊತೆ ಪ್ರಾಣದ ಹಂಗು ತೊರೆದು ಇಂದಿಗೂ ಅಂಬಿಗನಾಗಿ ಕೆಲಸ ಮಾಡುತ್ತಿದ್ದಾರೆ.
ಅಡ್ಡೂರು ಹೊಳೆ ಬದಿಯ ಕಡವು ಪ್ರದೇಶದ ಎರಡು ಗ್ರಾಮಗಳ ಸಂಪರ್ಕದ ಬಗ್ಗೆ ಅತೀ ಹೆಚ್ಚಾಗಿ ಇವರು ತಿಳಿದುಕೊಂಡಿದ್ದಾರೆ. ಒಂದು ತೀರದಿಂದ ಮತ್ತೊಂದು ತೀರಕ್ಕೆ ಜನರನ್ನು ಸಾಗಿಸುವಾಗ ಹಳೇ ಕಾಲದ ನೆನಪನ್ನು ವಿವರಿಸುತ್ತಾ, ಜನರಿಗೂ ದೋಣಿ ಪ್ರಯಾಣ ಬೋರ್ ಆಗದಂತೆ ಕೊಂಡೊಯ್ಯುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಮಳೆ, ಬಿಸಿಲು ಹಾಗೆಯೇ ರಾತ್ರಿ, ಹಗಲೆನ್ನದೇ ಕರೀಂ ಸೇವೆಯಲ್ಲಿ ಕಾರ್ಯನಿರತರಾಗಿರುತ್ತಿದ್ದರು. ಇವರ ಸೇವೆಗೆ ಜನರು ಇಂದಿಗೂ ಧನ್ಯವಾದಗಳನ್ನು ಅರ್ಪಿಸುತ್ತಲೇ ಇದ್ದಾರೆ.
ವಯಸ್ಸಾದರೂ ಸೇವೆಯ ಛಲ ಬಿಡದ ಕರೀಂ
ಜೀವನ ಶೈಲಿ, ಸಾಂಪ್ರದಾಯಿಕ ಆಹಾರ ಪದ್ಧತಿ ಇವೆಲ್ಲವೂ ಕರೀಂ ಅವರ ಆರೋಗ್ಯವನ್ನು ಇಂದಿಗೂ ಕಾಯ್ದುಕೊಂಡಿದೆ. ಈ ನಿಟ್ಟಿನಲ್ಲಿ ಗ್ರಾಮದ ಜನತೆಗೆ ಇಂದಿಗೂ ಇವರ ಸೇವೆಯನ್ನು ಭಯಸುತ್ತಲೇ ಇದ್ದಾರೆ. 97 ವರ್ಷ ಆದರೂ ಅಪಾಯದ ಮಟ್ಟದಲ್ಲಿ ತುಂಬಿ ತುಳುಕುತ್ತಿರುವ ನದಿಯಲ್ಲಿ ದೋಣಿ ನಾವಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಕರೀಂ ಬ್ಯಾರಿ ಮಂಗಳೂರಿನ ಪೊಳಲಿ ಸಮೀಪದ ಅಡ್ಡೂರಿನ ಪಲ್ಗುಣಿ ನದಿಯಲ್ಲಿ ಜನರ ಸಂಪರ್ಕ ಸೇತುವೆಯಂತೆ ಜನರ ಸೇವೆ ಮಾಡುತ್ತಿದ್ದಾರೆ.

ಯುವಕರನ್ನೂ ನಾಚಿಸುವಂತಹ ಜೀವನೋತ್ಸಾಹವನ್ನು ಕರೀಂ ಬ್ಯಾರಿ ಹೊಂದಿದ್ದು, ನದಿ ನೀರಿನ ಜೊತೆಗೆ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಜನರು ಮಾರುಹೋಗಿದ್ದಾರೆ. ತುರ್ತು ಸಂದರ್ಭ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ದೋಣಿ ಸೇವೆಯನ್ನು ನೀಡುತ್ತಲೇ ಬಂದಿದ್ದು, ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

97ನೇ ವಯಸ್ಸಿನಲ್ಲಿಯೂ ನಿಸ್ವಾರ್ಥ ಸೇವೆ
ತಮ್ಮ ಉತ್ಸಾಹದ ಬಗ್ಗೆ ಕರೀಂ ಬ್ಯಾರಿ ಮಾತನಾಡಿದ್ದು, ನಾನು ದೋಣಿ ಆರಂಭಿಸುವ ಕಾಲದಲ್ಲಿ ಬಸ್ ವ್ಯವಸ್ಥೆ ಇರಲಿಲ್ಲ. ಅಂದಿನಿಂದ ಇಂದಿನವರೆಗೆ ದೋಣಿಯ ಅಂಬಿಗನಾಗಿ ಕೆಲಸ ಮಾಡುತ್ತಿದ್ದೇನೆ. ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ, ದೇವರ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳು ಇದೆಲ್ಲ ಬೇಡ, ಸುಮ್ಮನೆ ಮನೆಯಲ್ಲಿಯೇ ಅರಮಾಗಿರಿ ಎಂದು ಹೇಳುತ್ತಾರೆ. ಆದರೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ದೋಣಿಯಲ್ಲಿ ಕೆಲಸ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕರೀಂ ಬ್ಯಾರಿ, ದೋಣಿಯಲ್ಲಿ ಹೋಗುವವರಿಗೆ ಪ್ರಕೃತಿಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಜೀವನ ಅನುಭವ ಹೊಂದಿರುವ ಕರೀಂ ಬ್ಯಾರಿ, ಹವಾಮಾನ ವೈಪರಿತ್ಯದ ಬಗ್ಗೆಯೂ ಸ್ವಂತ ಪಾಂಡಿತ್ಯವನ್ನು ಹೊಂದಿದ್ದಾರೆ. ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ದೋಣಿ ನಡೆಸುತ್ತಾರೆ. ಮಲ್ಲೂರು- ಅಡ್ಡೂರು ಭಾಗದ ಜನರಿಗೆ ಸುಲಭ ಸಂಪರ್ಕ ಒದಗಿಸುತ್ತಾರೆ ಎಂದು ಸ್ಥಳೀಯರಾದ ಮೊಯಿದ್ದೀನ್ ಹಾಜಿ ಮಾಹಿತಿ ನೀಡಿದರು.












Click it and Unblock the Notifications