ಮಂಗಳೂರು : ರೈಲು ಅಪಘಾತ ತಪ್ಪಿಸಿದ ರೈತ
ಮಂಗಳೂರು, ಆಗಸ್ಟ್ 3 : ಮಂಗಳೂರು ನಗರದ ಹೊರ ವಲಯದ ಪಚ್ಚನಾಡಿಯಲ್ಲಿ ಶನಿವಾರ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮಿನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ರಥ ಪುಷ್ಪವನ್ನು ಕೈಯಲ್ಲಿ ಹಿಡಿದು ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲು ನಿಲ್ಲಿಸಿದ ಪಚ್ಚನಾಡಿಯ ಕೃಷಿಕ ಫ್ರಾಂಕ್ಲಿನ್ ಫೆರ್ನಾಂಡಿಸ್ ಅವರ ಸಮಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಬಿರುಕು ಹೇಗಾಯಿತು?, ಇದಕ್ಕೆ ಕಾರಣವೇನು? ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.[ಹಳಿಯ ಬಿರುಕು ನೋಡಿ ರೈಲು ನಿಲ್ಲಿಸಿದ ಬಾಲಕ]
ಘಟನೆ ಬಗ್ಗೆ ಫ್ರಾಂಕ್ಲಿನ್ ಹೇಳಿದಿಷ್ಟು? : 'ಪಚ್ಚನಾಡಿಯ ರೈಲ್ವೇ ಸೇತುವೆ ಬಳಿ ವಾಸವಾಗಿರುವ ನಾನು ಶನಿವಾರ ಬೆಳಗ್ಗೆ 8.30ಕ್ಕೆ ರೈಲು ಮಾರ್ಗದ ಬಳಿ ಹುಲ್ಲು ತರಲು ಹೊರಟಿದ್ದೆ. ಸುಮಾರು 50 ಮೀ. ದೂರದಲ್ಲಿ ರೈಲು ಮಾರ್ಗದ ಬಳಿ ಹಲವು ಮಂದಿ ಮಕ್ಕಳು, ಮಹಿಳೆಯರು ನಿಂತುಕೊಂಡು ಏನನ್ನೋ ಗಂಭೀರವಾಗಿ ನೋಡುತ್ತಿರುವುದು ಕಂಡು ಬಂತು'. [ಮಂಗಳೂರು ರೈಲ್ವೆ ಸಿಬ್ಬಂದಿಗಳ ಗೋಳು ಕೇಳುವವರಾರು?]

'ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಬಸ್ ಬಂದಿದ್ದು, ಅವರೆಲ್ಲರೂ ಬಸ್ ಹತ್ತಿ ಹೋಗಿದ್ದರು. ಸಮೀಪದ ಪೀಟರ್ ಅವರನ್ನು ವಿಚಾರಿಸಿದಾಗ ರೈಲು ಹಳಿಯಲ್ಲಿ ಬಿರುಕು ಇರುವುದನ್ನು ನನಗೆ ತೋರಿಸಿದರು' ಎಂದು ಫ್ರಾಂಕ್ಲಿನ್ ಘಟನೆಯ ಬಗ್ಗೆ ಹೇಳಿದರು. [ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]
ಫೋನ್ ನಂಬರ್ ಸಿಗಲಿಲ್ಲ : ಹಳಿಯಲ್ಲಿನ ಬಿರುಕನ್ನು ನೋಡಿದ ಫ್ರಾಂಕ್ಲಿನ್ ತಕ್ಷಣ ರೈಲ್ವೆ ವಿಚಾರಣಾ ಕೌಂಟರ್ಗೆ ಫೋನ್ ಮಾಡಿದ್ದಾರೆ. ಅಲ್ಲಿ ತಮಿಳು ಭಾಷೆಯ ಧ್ವನಿ ಕೇಳಿಸಿತು. ಇವರು ಹೇಳಿದ್ದು ಅವರಿಗೆ ಅರ್ಥವಾಗಲಿಲ್ಲ. ಅವರು ಫೋನ್ ಕಟ್ ಮಾಡಿದರು.
ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ರೈಲ್ವೆಯ ದೂರವಾಣಿ ಸಂಖ್ಯೆಗಳನ್ನು ಕೇಳಿದ್ದಾರೆ. ಅವರು ಡೈರೆಕ್ಟರಿಯಲ್ಲಿ ಇದೆ ಅದನ್ನು ಹುಡುಕಿ ನೀಡುತ್ತೇನೆ ಎಂದರು. ಅಷ್ಟರಲ್ಲಿ ಮಂಗಳೂರು-ಮಡಗಾಂವ್ ಎಕ್ಸ್ಪ್ರೆಸ್ ರೈಲು ಈ ಮಾರ್ಗದಲ್ಲಿ ಆಗಮಿಸುತ್ತಿರುವುದು ಫ್ರಾಂಕ್ಲಿನ್ ಅವರಿಗೆ ತಿಳಿಯಿತು.
ಏನು ಮಾಡುವುದೆಂದು ತಿಳಿಯದ ಅವರು, ರಸ್ತೆ ಬದಿಯಲ್ಲಿದ್ದ ರಥ ಪುಷ್ಪದ ಗಿಡದಿಂದ ದೊಡ್ಡ ಗಾತ್ರದ ಕೆಂಪು ಹೂವು ಎತ್ತಿಕೊಂಡರು. ಅದನ್ನು ಎತ್ತಿ ಹಿಡಿದು ರೈಲು ಬರುವ ಕಡಗೆ ಓಡಿದರು. ದೂರದಲ್ಲಿ ರೈಲು ಬರುತ್ತಿರುವುದನ್ನು ಕಂಡು ರಥ ಪುಷ್ಪವನ್ನು ಎತ್ತಿ ಕೆಂಪು ನಿಶಾನೆಯ ಹಾಗೆ ಬೀಸಿದರು. ಅವರ ಜೊತೆ ಪೀಟರ್ ಅವರು ಇದ್ದರು.
ಇಬ್ಬರನ್ನು ನೋಡಿದ ರೈಲು ಚಾಲಕ ಹಳಿ ಬಿರುಕು ಕಾಣಿಸಿಕೊಂಡ ಸ್ಥಳದಿಂದ ಸುಮಾರು 30 ಮೀ. ಹಿಂದಕ್ಕೆ ರೈಲನ್ನು ನಿಲ್ಲಿಸಿದರು. ರೈಲಿನಿಂದ ಇಳಿದುಬಂದ ಚಾಲಕ ಹಳಿಯ ಬಿರುಕನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು.
ರೈಲ್ವೆ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಆಗಮಿಸಿ ಹಳಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿ ರೈಲು ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. 8.30ಕ್ಕೆ ಅಲ್ಲಿಗೆ ತಲುಪಿದ್ದ ಮಂಗಳೂರು- ಮಡಗಾಂವ್ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು 9.40ಕ್ಕೆ ಅಲ್ಲಿಂದ ಪ್ರಯಾಣ ಬೆಳೆಸಿತು.












Click it and Unblock the Notifications