Mangaluru Drugs case: ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ಮೆಡಿಕಲ್ ವಿದ್ಯಾರ್ಥಿಗಳ ಅಮಾನತು
ಮಂಗಳೂರು, ಜನವರಿ, 20: ಮಂಗಳೂರು ನಗರದಲ್ಲಿ ವೈದ್ಯರ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದ ಇಬ್ಬರು ವೈದ್ಯರು ಹಾಗೂ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಅಮಾನತು ಮಾಡಿದೆ.
ಅತ್ತಾವರ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸಮೀರ್, ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಮುತ್ತು ಅಮಾನತಾಗಿರುವ ವೈದ್ಯರಾಗಿದ್ದಾರೆ. ಅದೇ ರೀತಿ ಡಾ.ಕಿಶೋರಿ ಲಾಲ್, ಡಾ.ನದೀಯಾ ಸಿರಾಜ್, ಡಾ. ವರ್ಷಿಣಿ ಪತ್ರಿ, ಡಾ.ರಿಯಾ ಚಡ್ಡ, ಡಾ.ಇರಾ ಬಾಸಿನ, ಡಾ.ಕ್ಷಿತಿಜ್ ಗುಪ್ತಾ, ಡಾ.ಹರ್ಷ ಕುಮಾರ್ ವಿ.ಎಸ್. ಅಮಾನತು ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳೂರಿನಲ್ಲಿ ಗಾಂಜಾ ದಂಧೆ ಪ್ರಕರಣ: ಮೆಡಿಕಲ್ ವಿದ್ಯಾರ್ಥಿನಿಯರು ಸೇರಿದಂತೆ 10 ಜನರು ಸಿಸಿಬಿ ವಶಕ್ಕೆ
ಡ್ರಗ್ಸ್ ದಾಸರಿಗೆ ಗೇಟ್ ಪಾಸ್ ನೀಡಿದ ಕೆಎಂಸಿ
ಮಂಗಳೂರಿನಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಪೆಡ್ಲಿಂಗ್ ಹಾಗೂ ಗಾಂಜಾ ಸೇವನೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ. ಅದೇ ರೀತಿ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆಸ್ಪತ್ರೆಯಿಂದ ಅಮಾನತು ಮಾಡಿದೆ. ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿರುವ ಕೆಎಂಸಿ ಡೀನ್ ಉನ್ನಿಕೃಷ್ಣನ್ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಕೆಎಂಸಿ ಸಂಸ್ಥೆಯ ಡೀನ್ ಅವರು ಭೇಟಿಯಾಗಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದಾಗಿ ಹೇಳಿದ್ದಾರೆ. ಇವರ ನಡೆಯನ್ನು ಪ್ರಸಂಶಿಸುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಈ ದಂಧೆಯನ್ನು ಆಸ್ಪತ್ರೆ ವ್ಯಾಪ್ತಿಯ ಒಳಗೆ ಮಾಡಿಲ್ಲ. ಬಂಧಿತರು ನೆಲೆಸಿದ್ದ ರೂಂಗಳಲ್ಲಿ ದಂಧೆಯನ್ನು ಮಾಡುತ್ತಿದ್ದರು. ಬೇಗನೇ ಹಣ ಮಾಡುವ ಉದ್ದೇಶದಿಂದ ಈ ದಂಧೆಯನ್ನು ಮಾಡುತ್ತಿದ್ದರು ಅಂತಾ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.