ಅತ್ಯಾಚಾರಿಗಳ ಗಲ್ಲಿಗೆ ಒತ್ತಾಯಿಸಿ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಬಂದ್
ಮಂಗಳೂರು ಏಪ್ರಿಲ್ 23: ಜಮ್ಮು- ಕಾಶ್ಮೀರದ ಕಥುವಾ ಘಟನೆ , ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣ ಸೇರಿದಂತೆ ಇನ್ನಿತರ ಬಾಲಕಿಯರ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಕೃತ್ಯ ಖಂಡಿಸಿ ಹಾಗು ಆ ಕೃತ್ಯ ಎಸಗಿದವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಒತ್ತಾಯಿಸಿ ಮಂಗಳೂರಿನಲ್ಲಿಂದು ಮಾರುಕಟ್ಟೆ ವ್ಯಾಪರಸ್ಥರು ಬಂದ್ ಆಚರಿಸುತ್ತಿದ್ದಾರೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ರಲ್ ಮಾರುಕಟ್ಟೆಯನ್ನು ಇದೇ ಮೊದಲ ಬಾರಿಗೆ ವ್ಯಾಪಾರಸ್ಥರು ಬಂದ್ ಮಾಡಿದ್ದಾರೆ. ಅಲ್ಲದೆ ಮೀನು ಮಾರುಕಟ್ಟೆ ಹಾಗೂ ಹಳೆ ಬಂದರು ಪ್ರದೇಶದಲ್ಲಿ ಅಘೋಷಿತ ಬಂದ್ ಜಾರಿಯಾಗಿದೆ.
ಬೆಳ್ಳಂಬೆಳಿಗ್ಗೆ ವ್ಯಾಪಾರ ವಹಿವಾಟು ಆರಂಭವಾಗುವ ಹಳೆ ಬಂದರು ಪ್ರದೇಶದಲ್ಲಿ ರಖಂ ಹಾಗೂ ಚಿಲ್ಲರೆ ವ್ಯಾಪಾರಸ್ಥರು, ಗುಜರಿ ಅಂಗಡಿ ಮಾಲಕರು ಬಂದ್ ನಲ್ಲಿ ಪಾಲ್ಗೊಂಡಿದ್ದು, ತಮ್ಮ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾರ್ಥವಾಗಿ ತೆರೆದಿಲ್ಲ.

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಂದರು ಪ್ರದೇಶದ ಬಹುತೇಕ ಭಾಗಗಳು ಇಂದು ಬಂದ್ ಆಗಿದೆ. ಬಂದರು ಪ್ರದೇಶದ ಕೆಲ ಭಾಗಗಳಲ್ಲಿ ಕಥುವಾ ಘಟನೆ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸುವ ಬ್ಯಾನರ್, ಪೋಸ್ಟರ್ ಗಳನ್ನು ಹಾಕಲಾಗಿದೆ. ಅಂಗಡಿಗಳ ಮುಂದೆ ಕರ ಪತ್ರಗಳನ್ನು ಅಂಟಿಸಲಾಗಿದೆ.

ಈ ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.












Click it and Unblock the Notifications