ಸುರತ್ಕಲ್ ಬಂಟರ ಭವನದಲ್ಲಿ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು, ಜೂನ್ 27 : ಬಂಟ ಸಮಾಜ ಎಲ್ಲರನ್ನೂ ಪ್ರೀತಿ ಮಾಡುವ ಮತ್ತು ಮರ್ಯಾದೆ ನೀಡಿ ಗೌರವಿಸುವ ಸಮಾಜವಾಗಿದೆ ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಭಾನುವಾರದಂದು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಸುರತ್ಕಲ್ ಬಂಟರ ಸಂಘದ ಮಹಾಸಭೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಂಟ ಸಮಾಜದಲ್ಲಿ ಒಗ್ಗಟ್ಟು ಸೌಹಾರ್ದತೆ ಮುಖ್ಯ ಅದನ್ನು ಉಳಿಸಿ ಬೆಳೆಸಿ ಬೇರೆ ಸಮಾಜವನ್ನು ಗೌರವಿಸುವ ಮತ್ತು ಒಗ್ಗಟ್ಟನ್ನು ಬೆಳೆಸುವ ಪ್ರಕ್ರಿಯೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಮುಂಬಯಿ ವಿ.ಕೆ.ಗ್ರೂಪ್ ಆಫ್ ಕಂಪನೀಸ್ ಸಂಸ್ಥೆಯ ಚೇರ್ಮನ್ ಕರುಣಾಕರ ಎಂ.ಶೆಟ್ಟಿ ಮದ್ಯಗುತ್ತು ಮಾತನಾಡಿ, ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರದ ಕುರಿತು ತಿಳಿವಳಿಕೆ ನೀಡುವ ಕೆಲಸ ನಡೆಯಬೇಕು. ಎಲ್ಲಾ ಮಕ್ಕಳು ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟಕ್ಕೆ ಏರಿದಾಗ ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದರು.
ಉದ್ಯಮಿ ರಮಾನಾಥ ಶೆಟ್ಟಿ ಕೃಷ್ಣಾಪುರ, ಪಿಡಬ್ಲ್ಯುಡಿ ಅಸಿಸ್ಟೆಂಟ್ ಇಂಜಿನಿಯರ್ ರಾಜೇಶ್ ರೈ, ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಅಭಿನಂದನೆ ಹಾಗೂ ವಿಧವೆಯವರಿಗೆ, ಭಿನ್ನ ಸಾಮರ್ಥ್ಯದವರಿಗೆ, ವಿಕಲ ಚೇತನರಿಗೆ ಸಹಾಯ ಹಸ್ತ ನೀಡಲಾಯಿತು.
ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಪಿ.ಶೆಟ್ಟಿ ಜತೆ ಕಾರ್ಯದರ್ಶಿ ಜಯರಾಮ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ವರಿ ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಲೀಲಾಧರ್ ಶೆಟ್ಟಿ ಮತ್ತು ಚಿತ್ರಾ ಜೆ.ಶೆಟ್ಟಿಯವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.











Click it and Unblock the Notifications