2008ರ ಅಹಮದಾಬಾದ್ ಸ್ಫೋಟ ಪ್ರಕರಣ; ಮಂಗಳೂರು ಮೂಲದ ಇಬ್ಬರಿಗೆ ಗಲ್ಲು
ಮಂಗಳೂರು, ಫೆಬ್ರವರಿ 20; 2008ರ ಜುಲೈ 28ರಂದು ಗುಜರಾತ್ನ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ. ಒಟ್ಟು 49 ಉಗ್ರರ ಪೈಕಿ ಕೋರ್ಟ್ 38 ಮಂದಿಗೆ ಗಲ್ಲು ಶಿಕ್ಷೆ ಪ್ರಕಟಿಸಿದೆ. ಇವರ ಪೈಕಿ ಇಬ್ಬರು ಮಂಗಳೂರು ಮೂಲದವರಾಗಿದ್ದು, ಭೀಕರ ಹತ್ಯಾಕಾಂಡ ನೇರ ಪಾಲುದಾರರಾಗಿದ್ದಾರೆ.
ಮಂಗಳೂರಿನ ಸಯ್ಯದ್ ಮೊಹಮ್ಮದ್ ನೌಷಾದ್ ಹಾಗೂ ಅಹ್ಮದ್ ಬಾವ ಎಂಬ ಇಬ್ಬರು ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. 14 ವರ್ಷಗಳ ಹಿಂದೆ ಅಹಮದಾಬಾದ್ನಲ್ಲಿ ನಡೆದ ಈ ಬಾಂಬ್ ಸ್ಫೋಟದಲ್ಲಿ ಈ ಉಗ್ರರು ರೂವಾರಿಯಾಗಿದ್ದರು. ಈ ಘಟನೆಯಲ್ಲಿ 56 ಅಮಾಯಕರು ಜೀವ ಕಳಕೊಂಡಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.
ಅಹಮದಾಬಾದ್ ಸುತ್ತಮುತ್ತಾ 22 ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ಸುಮಾರು 13 ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ, ಫೆಬ್ರವರಿ 8ರಂದು ವಿಶೇಷ ನ್ಯಾಯಾಲಯ 49 ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ. ಈ ಪ್ರಕರಣವನ್ನು ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಕ್ರಿಮಿನಲ್ ವಿಚಾರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್ ಗಳಾದ ಯಾಸಿನ್ ಭಟ್ಕಳ ಹಾಗೂ ರಿಯಾಜ್ ಭಟ್ಕಳನ ನಿಕಟವರ್ತಿಯಾಗಿದ್ದ ನೌಷಾದ್ ಮಂಗಳೂರಿನ ಪಾಂಡೇಶ್ವರದ ಸುಭಾಷ್ ನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ವಿದ್ಯಾವಂತನಾಗಿದ್ದ ಕಾರಣ ಬಾಡಿಗೆ ಮನೆ ಮಾಲೀಕರ ಮೆಚ್ಚುಗೆ ಗಳಿಸಿದ್ದ. ಆದರೆ 2008ರ ಅಕ್ಟೋಬರ್ 3ರಂದು ಮುಂಜಾನೆ ಸೈಯದ್ ಬಂಧಿಸಿದ ವೇಳೆಯಲ್ಲಿ ಉಗ್ರನ ಮುಖವಾಡ ಕಳಚಿದೆ. ಆತನ ಜತೆಗೆ ಉಳ್ಳಾಲದಿಂದ ಮೊಹಮ್ಮದ್ ಅಲಿ ಹಾಗೂ ಜಾವಿದ್ ಅಲಿ, ಹಳೆಯಂಗಡಿಯ ಅಹ್ಮದ್ ಬಾವ ಎಂಬುವರನ್ನು ಬಂಧಿಸಲಾಗಿತ್ತು.
ನೌಷಾದ್ನ ಸುಭಾಷ್ ನಗರದ ಮನೆ ಇಂಡಿಯನ್ ಮುಜಾಹೀದ್ದಿನ್ ಉಗ್ರರು ಸಮಾಲೋಚನೆ ನಡೆಸುವ ತಾಣವಾಗಿತ್ತು. 2008ರಲ್ಲಿ ಆತನ ಬಂಧನದ ಜತೆಗೆ ಜಿಹಾದಿ ಸಾಹಿತ್ಯ, ಕಚ್ಚಾ ಬಾಂಬ್, ಹಾರ್ಡ್ ಡಿಸ್ಕ್, ಮೊಬೈಲ್ ಇತ್ಯಾದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ನೌಷಾದ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆತನಿಗೆ ಸರ್ಕಿಟ್ ತಯಾರಿಕೆ ಗೊತ್ತಿತ್ತು. ಅಮೋನಿಯಂ ನೈಟ್ರೇಟ್ ಬಳಸಿ ಸರ್ಕಿಟ್ ಜೋಡಿಸಿ ಸೂರತ್ಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲಿ ಇಕ್ಬಾಲ್ ಭಟ್ಕಳ್ ಎಂಬ ಉಗ್ರ ಡೆಟೋನೇಟರ್ ಗಳನ್ನು ಜೋಡಿಸಿ ಸ್ಫೋಟಕ್ಕೆ ಬಳಸುತ್ತಿದ್ದ ಎನ್ನುವುದು ಹಿಂದೆ ವಿಚಾರಣೆಯಲ್ಲಿ ಬಯಲಾಗಿತ್ತು.
ನೌಷಾದ್ ಬಾಡಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ನೆರೆಯ ಮನೆಯವರೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಕಾರಣ ಉತ್ತಮ ಡ್ರೆಸ್ ಸೆನ್ಸ್ ಕೂಡಾ ಹೊಂದಿದ್ದ. ಮಿತಭಾಷಿಯಾಗಿದ್ದು ಯಾರ ಜೊತೆಯೂ ಕಿರಿ ಕಿರಿ ಮಾಡಿಕೊಳ್ಳದ ಕಾರಣ ಬಾಡಿಗೆ ಮನೆ ಮಾಲೀಕರು ನೌಷಾದ್ ಮೇಲೆ ಅಪಾರ ನಂಬಿಕೆ ಇರಿಸಿದ್ದರು.
ಮನೆಯೊಳಗೆ ಸೇರಿದರೆ ಬಾಗಿಲು ಹಾಕಿಕೊಳ್ಳುತ್ತಿದ್ದ ನೌಷಾದ್ ಮತ್ತೆ ಬಾಗಿಲು ತೆರೆಯುತ್ತಿದ್ದು ಮಾರನೇ ದಿನವೇ ಆಗಿರುತಿತ್ತು. ಇಂತಹ ಸೌಮ್ಯ ಸ್ವಭಾವದ ವ್ಯಕ್ತಿಯೊಳಗೆ ಉಗ್ರನಿರುವ ವಿಚಾರ ಬಯಲಾಗುತ್ತಿದ್ದಂತೆಯೇ ಇಡೀ ಮಂಗಳೂರು ಬೆಚ್ಚಿ ಬಿದ್ದಿತ್ತು. ನಂತರದ ಬಾಡಿಗೆ ಮನೆ ಕೊಡುವ ಬಗ್ಗೆ ನಿಯಮಗಳು ಕಠಿಣವಾದವು. ಅದರಲ್ಲೂ ಅವಿವಾಹಿತರಿಗೆ ಬಾಡಿಗೆ ಮನೆಗಳನ್ನು ಕೊಡೋದಕ್ಕೂ ಮನೆ ಮಾಲೀಕರು ಹಿಂಜರಿಯುತ್ತಿದ್ದರು.
ನೌಷಾದ್ ಮತ್ತು ಮಂಗಳೂರಿನಲ್ಲಿ ಬಂಧನವಾದ ಮೂವರು ಉಗ್ರರ ಮೇಲೆ ಅಹಮದಾಬಾದ್ ಮತ್ತು ಸೂರತ್ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆರೋಪವಿತ್ತು. ಮಂಗಳೂರಿನ ಕೋರ್ಟ್ ಈಗಾಗಲೇ ನೌಷಾದ್ ಹಾಗೂ ಅಹ್ಮದ್ ಬಾವ ಎಂಬವರನ್ನು ದೋಷಿ ಎಂದು ಘೋಷಿಸಿತ್ತು. ಈಗ ಅಹಮದಾಬಾದ್ ನ್ಯಾಯಾಲಯವೂ ಒಟ್ಟು 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದೋಷಿಗಳ ಪೈಕಿ 38 ಜನರಿಗೆ ಭಾರತೀಯ ದಂಡ ಸಂಹಿತೆ 302ನೇ ವಿಧಿ (ಹತ್ಯೆ), 120ಬಿ (ಕ್ರಿಮಿನಲ್ ಸಂಚು), ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದರೆ, 11 ಜನರಿಗೆ ಕ್ರಿಮಿನಲ್ ಸಂಚು ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 48 ದೋಷಿಗಳಿಗೆ ಒಟ್ಟು 2.85 ಲಕ್ಷ ಮತ್ತು ಓರ್ವ ದೋಷಿಗೆ 2.88 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಘಟನೆಯಲ್ಲಿ ಮಡಿದವರಿಗೆ ತಲಾ 1 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ರೂ. ಮತ್ತು ಸಾಮಾನ್ಯ ಗಾಯಕ್ಕೆ ತುತ್ತಾದವರಿಗೆ ತಲಾ 25,000 ರೂ.ಗಳ ಪರಿಹಾರವನ್ನು ನ್ಯಾಯಾಲಯ ಪ್ರಕಟಿಸಿದೆ.
ಅಹಮದಾಬಾದ್ ಸರಣಿ ಸ್ಫೋಟದಹಿಂದೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯುವ ಬಹುದೊಡ್ಡ ಸಂಚು ಅಡಗಿತ್ತು ಎಂಬ ಅಂಶವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ಇತರೆ ಸ್ಥಳಗಳಲ್ಲಿ ನಡೆದ ಸ್ಫೋಟದಲ್ಲಿ ಮಡಿದ ಮತ್ತು ಗಾಯಗೊಂಡವರನ್ನು ನೋಡಲು ಹೇಗಿದ್ದರೂ ಸಿಎಂ ಮೋದಿ ಆಸ್ಪತ್ರೆಗೆ ಭೇಟಿ ನೀಡಿಯೇ ನೀಡುತ್ತಾರೆ. ಹೀಗಾಗಿಯೇ ಮೋದಿ ಹತ್ಯೆಗೆ ಆಸ್ಪತ್ರೆಗಳೇ ಸೂಕ್ತ ಸ್ಥಾನ ಎನ್ನುವ ಕಾರಣಕ್ಕಾಗಿ ಹಲವು ಆಸ್ಪತ್ರೆಗಳಲ್ಲೂ ಸ್ಫೋಟ ನಡೆಸಲಾಗಿತ್ತು. ಇಲ್ಲದೇ ಹೋದಲ್ಲಿ ಸಾಮಾನ್ಯವಾಗಿ ಆಸ್ಪತ್ರೆಗಳನ್ನು ಗುರಿಯಾಗಿಸಿ ಸ್ಫೋಟ ನಡೆಸಲು ಸಾಧ್ಯವೇ ಇಲ್ಲ ಎಂಬ ಅಂಶ ತೀರ್ಪಿನಲ್ಲಿ ಅಡಕವಾಗಿದೆ.












Click it and Unblock the Notifications