ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು, ವಾಪಸ್ ಕಳುಹಿಸಿದ ಪ್ರಿನ್ಸಿಪಾಲ್
ಮಂಗಳೂರು, ಮೇ29: ಮಂಗಳೂರು ವಿಶ್ವವಿದ್ಯಾಲಯದ ಹಿಜಾಬ್ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ತರಗತಿಯೊಳಗೆ ಹಿಜಾಬ್ ಸಂಪೂರ್ಣ ನಿಷೇಧ ಎಂದು ಆದೇಶ ಹೊರಡಿಸಲಾಗಿದೆ. ಆದರೂ ಹಿಜಾಬ್ ಧರಿಸಿ ಕೆಲವು ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ಪ್ರಯತ್ನಿಸಿದ್ದು, ಅವರನ್ನು ತಡೆದು ಮನೆಗೆ ಕಳುಹಿಸಿದ ಘಟನೆ ಶನಿವಾರ ನಡೆದಿದೆ.
ಮಂಗಳೂರು ವಿಶ್ವವಿದ್ಯಾಲಯ ಪದವಿ ಕಾಲೇಜಿನಲ್ಲಿ ಆರಂಭಗೊಂಡ ಹಿಜಾಬ್ ವಿವಾದ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಹಿಜಾಬ್ ಧರಿಸಿ ಕಾಲೇಜು ತರಗತಿಗೆ ಆಗಮಿಸಿದ್ದ ವಿದ್ಯಾರ್ಥಿನಿಯರ ವಿರುದ್ಧ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಶುಕ್ರವಾರ ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿತ್ತು. ಶನಿವಾರದಿಂದ ತರಗತಿ, ಗ್ರಂಥಾಲಯದಲ್ಲಿ ಹಿಜಾಬ್ ಧರಿಸಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಆದರೆ ಶನಿವಾರ ಕೂಡಾ ಸುಮಾರು 15 ವಿದ್ಯಾರ್ಥಿನಿಯರು ಕಾಲೇಜ್ ಕ್ಯಾಂಪಸ್ಗೆ ಬುರ್ಖಾ ಧರಿಸಿ ಆಗಮಿಸಿದ್ದು, ಬಳಿಕ ಹಿಜಾಬ್ನೊಂದಿಗೆ ತರಗತಿ ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಶಿಕ್ಷಕರು ಇವರನ್ನು ತಡೆದಿದ್ದು ಹಿಜಾಬ್ ತೆಗೆದು ತರಗತಿಗೆ ಬರಲು ಸೂಚಿದ್ದರು. ಆದರೆ ಇದನ್ನು ವಿರೋಧಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಗ್ರಂಥಾಲಯದ ಹೊರ ಭಾಗದಲ್ಲೇ ಹಿಜಾಬ್ ಧರಿಸಿ ಪಠ್ಯ ಓದಲು ಆರಂಭಿಸಿದ್ದರು.

ಶಾಸಕ ವೇದವ್ಯಾಸ ಕಾಮತ್ ಬೇಸರ
ಕಾಲೇಜಿನ ತರಗತಿಯಲ್ಲಿ ಹಿಜಾಬ್ ನಿಷೇಧ ಎಂದು ಆಡಳಿತ ಮಂಡಳಿ ನಿರ್ಧಾರ ಮಾಡಿರುವುದು ಕೋರ್ಟ್ ಆದೇಶದಂತೆ. ಹೀಗಾಗಿ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಈ ವಿದ್ಯಾರ್ಥಿನಿಯರು ತರಗತಿ ಪ್ರವೇಶಿಸಲು ಬಂದಿದ್ದಾರೆ. ಈ ವಿದ್ಯಾರ್ಥಿಗಳ ನಡೆಗೆ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಕಾಲೇಜಿನಲ್ಲಿ ಪಾಲಿಸಲಾಗುತ್ತಿದೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದ್ದಾರೆ.

ಯಾರೋದೋ ಕುಮ್ಮಕ್ಕು ತಪ್ಪು ದಾರಿಗೆ ವಿದ್ಯಾರ್ನಿಯರು
ನ್ಯಾಯಾಲಯದ ಆದೇಶವನ್ನು ಗೌರವಿಸಿ ತರಗತಿಯಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಆದರೆ ತಪ್ಪು ಗ್ರಹಿಕೆಯಿಂದ ವಿದ್ಯಾರ್ಥಿಗಳಿದ್ದರೆ ಕೌನ್ಸಿಲಿಂಗ್ ಮಾಡುವ ಅಗತ್ಯವಿದೆ ಎಂದು ಕುಲಪತಿಗಳು ತಿಳಿಸಿದ್ದರು. ಆದರೆ ಶನಿವಾರವೂ ಕೂಡ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿದ ಆಗಮಿಸಿದ್ದಾರೆ. ವಿದ್ಯಾಭ್ಯಾಸದ ಅವಶ್ಯಕತೆ ಬಗ್ಗೆ ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಯಶಸ್ವಿಯಾದರೆ ವಿದ್ಯಾರ್ಥಿನಿಯರು ತರಗತಿಗೆ ಬರಬಹುದು. ವಿದ್ಯಾರ್ಥಿನಿಯರು ಯಾರದ್ದೋ ಕುಮ್ಮಕ್ಕಿನಿಂದ ತಪ್ಪು ದಾರಿಗೆ ಹೋಗದಿರಿ ಎಂದು ಶಾಸಕ ಕಾಮತ್ ವಿನಂತಿಸಿದ್ದಾರೆ.

ಹಿಜಾಬ್ಗೆ ಅವಕಾಶವಿಲ್ಲ
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯ ಜಾರಿ ಮಾಡಲಾಗಿದೆ. ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಲು ಅವಕಾಶವಿಲ್ಲ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಈಗಾಗಲೇ ತಿಳಿಸಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂಬ ಕೋರ್ಟ್ ನಿರ್ಣಯವನ್ನು ಪಾಲಿಸುವ ಬಗ್ಗೆ ಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ವಿಭಾಗ ಮುಖ್ಯಸ್ಥರೊಂದಿಗೆ ಮಾತನಾಡಿ 25ರಂದು ರಾತ್ರಿ ಕ್ಯಾಂಪಸ್ನಲ್ಲೂ ಹಿಜಾಬ್ ಧರಿಸುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಂದೇಶ ಕಳಿಸಲಾಗಿತ್ತು.

ವಿದ್ಯಾರ್ಥಿ ನಾಯಕ ರಾಜೀನಾಮೆ
ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಗಲಾಟೆಯಿಂದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿನ್ಯಾಸ್ ರಾಜೀನಾಮೆ ನೀಡಿದ್ದಾರೆ. ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಬಗ್ಗೆ ಮೃದು ಧೋರಣೆ ತೋರಿದ್ದಕ್ಕೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ವಿನ್ಯಾಸ್ ರಾಜೀನಾಮೆ ನೀಡಿದ್ದರು. ವಿದ್ಯಾರ್ಥಿ ನಾಯಕನಾಗಿರುವ ಕಾರಣ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಅಸಾಧ್ಯ. "ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಏಕಾಏಕಿ ಹಿಜಾಬ್ ತೆಗೆಯುವಂತೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದು ಕೆಲವರಿಗೆ ಬೇಸರ ತಂದಿದೆ. ಹಾಗಾಗಿ ನಾನು ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೀನಾಮೆ ಕೊಡುತ್ತೇನೆ" ಎಂದು ವಿನ್ಯಾಸ್ ಹೇಳಿದ್ದಾರೆ.
ಮಂಗಳೂರು ವಿವಿ ಕಾಲೇಜಿನಲ್ಲಿ ಒಟ್ಟು 43 ಹಿಜಾಬ್ ಧಾರಿಣಿಯರಿದ್ದು, ಸದ್ಯ 15 ಜನರು ಮಾತ್ರ ಹಿಜಾಬ್ ಗಲಾಟೆಯಲ್ಲಿ ತೊಡಗಿದ್ದಾರೆ.. ತರಗತಿಯಲ್ಲಿ, ಮತ್ತು ಲೈಬ್ರರಿಯಲ್ಲಿ ಹಿಜಾಬ್ ಧರಿಸೋಕೆ ಅವಕಾಶ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿಯವರ ಬಳಿ ವಿದ್ಯಾರ್ಥಿನಿಯರು ಮನವಿ ಮಾಡಿದ್ದು, ಸೋಮವಾರ ತನಕ ಕಾಲವಕಾಶ ಕೇಳಿದ್ದಾರೆ.
ಒಟ್ಟಿನಲ್ಲಿ ವಿದ್ಯಾರ್ಥಿನಿಯರು ಕೋರ್ಟ್ ಆದೇಶವನ್ನು ಧಿಕ್ಕರಿಸಿ ತರಗತಿಗೆ ಬರಲು ಯತ್ನಿಸಿರೋದರ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದು ಎನ್ನಲಾಗುತ್ತಿದೆ. ಆದರೆ ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕಾದ ಅವಶ್ಯಕತೆಯಿದೆ.












Click it and Unblock the Notifications