ಪಣಂಬೂರು ಬೀಚ್ನಲ್ಲಿ ಕದ್ದ ಚಿನ್ನ ಬೆಂಗಳೂರಲ್ಲಿ ಸಿಕ್ತು
ಮಂಗಳೂರು, ಜುಲೈ 11 : ಪಣಂಬೂರು ಬೀಚ್ನಲ್ಲಿ ಕಾರಿನ ಗಾಜು ಒಡೆದು 11 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದವನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕದ್ದ ಚಿನ್ನದಲ್ಲಿ ಅರ್ಧದಷ್ಟನ್ನು ಫೈನಾನ್ಸ್ನಲ್ಲಿ ಅಡವಿಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಯನ್ನು ವೇಣುಗೋಪಾಲ ಅಲಿಯಾಸ್ ವೇಣು (26) ಎಂದು ಗುರುತಿಸಲಾಗಿದೆ. ಸುಂಕದಕಟ್ಟೆಯಲ್ಲಿ ಸಿಸಿಬಿ ಪೊಲೀಸರು ವೇಣುವನ್ನು ಬಂಧಿಸಿದ್ದಾರೆ. ವೇಣು ಮೂಲತಃ ಪಿರಿಯಾಪಟ್ಟಣದವನಾಗಿದ್ದು, ಸುಂಕದಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. [ಪಣಂಬೂರು ಬೀಚ್ 11 ಲಕ್ಷ ದರೋಡೆ]

2015ರ ಜೂನ್ 7ರಂದು ಬೆಂಗಳೂರಿನಲ್ಲಿ ಗೃಹ ರಕ್ಷಕ ದಳದ ಉದ್ಯೋಗಿಯಾದ ಲಕ್ಷ್ಮೀ ಅವರು ಪಣಂಬೂರಿಗೆ ಸ್ನೇಹಿತರ ಜೊತೆ ಹೋಗಿದ್ದರು. ಅವರು ಕ್ವಾಲಿಸ್ ಕಾರಿನಲ್ಲಿ ಚಿನ್ನಾಭರಣಗಳನ್ನು ಇಟ್ಟು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೀಚ್ಗೆ ಹೋಗಿದ್ದರು. ಇದನ್ನು ನೋಡಿದ್ದ ವೇಣು ಕಾರಿನ ಗಾಜು ಒಡೆದು ಚಿನ್ನಭರಣ ದೋಚಿದ್ದ.
ಸಂಜೆ 5 ಗಂಟೆ ಸುಮಾರಿಗೆ ಕಾರಿನ ಬಳಿ ವಾಪಸ್ ಬಂದು ನೋಡಿದಾಗ ಕಾರಿನ ಗಾಜು ಒಡೆಯಲಾಗಿತ್ತು. ಕಾರಿನಲ್ಲಿದ ನೆಕ್ಲೇಸ್, ಬಳೆ ಸೇರಿದಂತೆ ಚಿನ್ನಾಭರಣಗಳನ್ನು ದೋಚಿದ್ದು, ಬೆಳಕಿಗೆ ಬಂದಿತ್ತು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು.
ಚಿನ್ನಭರಣ ಕದ್ದು ಬೆಂಗಳೂರಿಗೆ ಬಂದಿದ್ದ : ಚಿನ್ನಾಭರಣಗಳನ್ನು ದೋಚಿದ ನಂತರ ಬೆಂಗಳೂರಿಗೆ ಬಂದಿದ್ದ ವೇಣು, ಗೆಳತಿಯ ಸಹಾಯದಿಂದ ಅರ್ಧದಷ್ಟು ಚಿನ್ನವನ್ನು ವಿವಿಧ ಫೈನಾನ್ಸ್ಗಳಲ್ಲಿ ಅಡವಿಟ್ಟಿದ್ದ. ಕೆಲವು ಒಡೆವೆಗಳನ್ನು ಅವನ ಗೆಳತಿ ಹಾಕಿಕೊಂಡಿದ್ದಳು.
ವೇಣು ಮತ್ತು ಆತನ ಗೆಳತಿಯ ಜೀವನ ಶೈಲಿಯಲ್ಲಾದ ಬದಲಾವಣೆ ಸ್ಥಳೀಯರ ಅನುಮಾನಕ್ಕೆ ಕಾರಣವಾಗಿತ್ತು. ಸರಗಳ್ಳರ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರಿಗೆ ಈ ಕುರಿತು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು. ಪೊಲೀಸರು ವೇಣುವನ್ನು ಕರೆತಂದು ವಿಚಾರಣೆ ಮಾಡಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ವೇಣುವಿಗೆ ಸಹಾಯ ಮಾಡಿದ ಗೆಳತಿಗೆ ಎಚ್ಚರಿಕೆ ಕೊಟ್ಟು ಪೊಲೀಸರು ವಾಪಸ್ ಕಳಿಸಿದ್ದಾರೆ. ವೇಣುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜುಲೈ 20ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.












Click it and Unblock the Notifications