ಕನ್ನಡ ಶಾಲೆಗೆ ವರ್ಣಮಾಲೆ ಗೊತ್ತಿಲ್ಲದ ಮಲಯಾಳಿ ಶಿಕ್ಷಕಿ: ಸರ್ಕಾರದ ವಿರುದ್ಧ ಸಿಡಿದೆದ್ದ ಮಕ್ಕಳು
ಮಂಗಳೂರು, ಜೂನ್ 20: ಕೇರಳ ಸರ್ಕಾರ ಕನ್ನಡಕ್ಕೆ ಮತ್ತೆ ಮಲತಾಯಿ ಧೋರಣೆ ಬೀರಿದೆ. ಕನ್ನವೇ ಗೊತ್ತಿಲ್ಲದ ಮಲಯಾಳಿ ಶಿಕ್ಷಕಿ ಯನ್ನು ಕನ್ನಡ ಶಾಲೆಯ ಶಿಕ್ಷಕಿಯನ್ನಾಗಿ ಕೇರಳ ಸರ್ಕಾರ ನಿಯುಕ್ತಿ ಮಾಡಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಂತೆಯೇ ನೈಜ ಘಟನೆ ಕೇರಳ-ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಶಾಲೆಯ ಫ್ರೌಢ ತರಗತಿಗಳಿಗೆ ಶಿಕ್ಷಕಿಯಾಗಿ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ. ಕನ್ನಡ ಮತ್ತು ಮಲಯಾಳಂ ಮಾಧ್ಯಮಗಳು ಜೊತೆಯಾಗಿ ಇರುವ ಶಾಲೆ ಇದಾಗಿದ್ದು, ಪ್ರೌಢ ಶಾಲೆ ಕನ್ನಡ ಮಾಧ್ಯಮದ ಸಮಾಜ ವಿಜ್ಞಾನಕ್ಕೆ ತರಗತಿಗೆ ಹೊಸದಾಗಿ ಮಲಯಾಳಂ ಶಿಕ್ಷಕಿ ನಿಯುಕ್ತಿಗೊಂಡಿದ್ದಾರೆ.

ಕನ್ನಡದಲ್ಲೇ ಸಮಾಜ ವಿಜ್ಞಾನ ಪಾಠವನ್ನು ಕನ್ನಡ ವಿದ್ಯಾರ್ಥಿಗಳಿಗೆ ಹೇಳಬೇಕಾದ ಮಲಯಾಳಿ ಶಿಕ್ಷಕಿಗೆ ಕನ್ನಡದ ಅ.ಆ.ಇ.ಈ ಗೊತ್ತಿಲ್ಲ. ಕನ್ನಡವನ್ನು ಸರಿಯಾಗಿ ಉಚ್ಛರಿಸಲೂ ಬಾರದ ಶಿಕ್ಷಕಿ ನೇಮಕಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ರಾಜ್ಯ ಸರಕಾರದ ಕ್ರಮ ಖಂಡಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಹತ್ತನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕಿಯ ಪಾಠವೂ ಅರ್ಥವಾಗುತ್ತಿಲ್ಲ. ಇದರಿಂದ ಪರೀಕ್ಷೆ ಎದುರಿಸಲು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರದ ಕ್ರಮವನ್ನು ಪೋಷಕಿ ನಯನಾ ಖಂಡಿಸಿದ್ದಾರೆ. ಕನ್ನಡ ಗೊತ್ತಿಲ್ಲದ ಶಿಕ್ಷಕಿ ಕನ್ನಡದಲ್ಲಿ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ಮನೆಗೆ ಬಂದ ಮಕ್ಕಳು ಪಾಠ ಅರ್ಥ ಆಗಿಲ್ಲ ಅಂತಾ ಕೊರಗುತ್ತಿದ್ದಾರೆ. ಶಾಲೆಯಿಂದಲೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ನಮ್ಮ ಮಕ್ಕಳಿಗೆ ಕನ್ನಡವೇ ಮೊದಲ ಭಾಷೆ. ನ್ಯಾಯಾಲಯದ ಆದೇಶವಿದ್ದರೂ ಉಲ್ಲಂಘನೆಯಾಗುತ್ತಿದೆ. ಕೇರಳ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಪೋಷಕಿ ನಯನಾ ಒತ್ತಾಯಿಸಿದ್ದಾರೆ.
ಇನ್ನು ಹತ್ತನೇ ತರಗತಿ ವಿದ್ಯಾರ್ಥಿನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತರಗತಿಯಲ್ಲಿ ಶಿಕ್ಷಕಿಗೆ ನಾವು ಕನ್ನಡ ಕಲಿಸುತ್ತಿದ್ದೇವೆ. ಸರಿಯಾಗಿ ಕನ್ನಡದ ಶಬ್ಧವನ್ನು ಹೇಳಲು ಶಿಕ್ಷಕಿಗೆ ಸಾಧ್ಯವಾಗುತ್ತಿಲ್ಲ. ಪಾಠವನ್ನು ನಮ್ಮಲ್ಲೇ ಓದಲು ಹೇಳುತ್ತಿದ್ದಾರೆ. ಪಾಠವೂ ಅರ್ಧವಾಗುತ್ತಿಲ್ಲ. ಪಬ್ಲಿಕ್ ಪರೀಕ್ಷೆಯನ್ನು ಎದುರಿಸೋದು ಹೇಗೆ ಎಂದು ಭಯವಾಗುತ್ತಿದೆ ಎಂದು ತಮ್ಮ ಅಸಾಹಯಕತೆ ತೋಡಿಕೊಂಡಿದ್ದಾರೆ.












Click it and Unblock the Notifications