ಮಂಗಳೂರಿನ ವಿವಿ ಕಾಲೇಜಿನಲ್ಲಿ ಮೆಹಂದಿ, ಕೇಶವಿನ್ಯಾಸದ ಸಂಭ್ರಮ!
ಮಂಗಳೂರು, ಫೆಬ್ರವರಿ 23 : ಯಾವತ್ತೂ ಪಾಠ-ಪ್ರವಚನ ಎಂದು ಗಂಭೀರವಾಗಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಶನಿವಾರ ಮಾತ್ರ ವಿದ್ಯಾರ್ಥಿನಿಯರು ಮೆಹಂದಿ ಹಚ್ಚುವುದು, ಕೇಶವಿನ್ಯಾಸದಲ್ಲಿ ಬ್ಯುಸಿಯಾಗಿದ್ದರು.
ಈ ಸಂಭ್ರಮಕ್ಕೆ ಕಾರಣವಾದದ್ದು ಲಲಿತ ಕಲಾ ಸಂಘ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮೆಹಂದಿ ಹಚ್ಚುವ ಮತ್ತು ಕೇಶವಿನ್ಯಾಸ ಸ್ಪರ್ಧೆ. ನೂರಾರು ವಿದ್ಯಾರ್ಥಿನಿಯರು ಈ ಸ್ಪರ್ಧಿಯಲ್ಲಿ ಅತ್ಯಂತ ಲವಲವಿಕೆಯಿಂದ ಭಾಗವಹಿಸಿದರು.

ಎಲ್ಲಾ ಪದವಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಗಳಲ್ಲಿ ಮೆಹಂದಿ ಹಚ್ಚುವ ಕಲೆಯಲ್ಲಿ 13 ಮಂದಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರೆ, ಮೊದಲ ಬಾರಿಗೆ ಏರ್ಪಡಿಸಲಾಗಿದ್ದ ಕೇಶವಿನ್ಯಾಸ ಸ್ಪರ್ಧೆಯಲ್ಲಿ 11 ಮಂದಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಉದಯ್ ಕುಮಾರ್ ಎಂ.ಎ, ಸ್ಪರ್ಧಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಮೆಹಂದಿ ಹಚ್ಚುವ ಸ್ಪರ್ಧೆಗೆ ಹಿರಿಯ ಪ್ರಾಧ್ಯಾಪಕರಾದ ಡಾ. ಸುಭಾಷಿಣಿ ಶ್ರೀವತ್ಸ, ಪಿ. ರಾಜೇಶ್ವರಿ, ಡಾ. ಕೆ.ಎ. ನಾಗರತ್ನ, ಶಿಫಾಲಿ ಮೊದಲಾದವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ಕೇಶವಿನ್ಯಾಸ ಸ್ಪರ್ಧೆಗೆ ಡಾ. ಎನ್.ಕೆ. ರಾಜಲಕ್ಷ್ಮೀ, ಡಾ.ಭಾರತಿ ಪ್ರಕಾಶ್, ಪರಿಣಿತಾ, ವನಜಾ ಮೊದಲಾದವರು ತೀರ್ಪುಗಾರರಾಗಿದ್ದರು.

ಸ್ಪರ್ಧೆಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ ಕಲಾ ಸಂಘದ ನೇತೃತ್ವ ವಹಿಸಿರುವ ಡಾ. ಸುಮಾ ಟಿ.ಆರ್, ಹಿರಿಯ ಪ್ರಾಧ್ಯಾಪಕಿ ಡಾ. ಮೀನಾಕ್ಷಿ, ವಿದ್ಯಾರ್ಥಿ ಕಾರ್ಯದರ್ಶಿ ಮಯೂರೇಶ್, ಜೊತೆ ಕಾರ್ಯದರ್ಶಿ ಶ್ರೇಯಾ ಉಪಸ್ಥಿತರಿದ್ದರು.












Click it and Unblock the Notifications