ಮಾನಸಿಕವಾಗಿ ಕೊಲೆ ಮಾಡಲು ಯತ್ನಿಸಲಾಗುತ್ತಿದೆ ಎಂದ ಲೋಬೋ
ಮಂಗಳೂರು, ಏಪ್ರಿಲ್ 29: ಕುಡ್ಸೆಂಪ್ ನಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ನನ್ನ ಮೇಲೆ ಹೇರಿ ನನ್ನನ್ನು ಮಾನಸಿಕವಾಗಿ ಕೊಲೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿದ ಅವರು ಕುಡ್ಸೆಂಪ್ ಯೋಜನೆಯ ಹಗರಣದಲ್ಲಿ ನನ್ನ ಪಾತ್ರವಿದೆ ಎಂದು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಪ್ರತಿಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ ಎಂದು ವಿಷಾದವ್ಯಕ್ತಪಡಿಸಿದರು.

ಈ ವ್ಯಕ್ತಿಗಳು ಆರೋಪಿಸುತ್ತಿರುವ ಹಗರಣ ನಡೆದಿರುವುದು 2011, 2012, 2013ನೇ ಸಾಲಿನಲ್ಲಿ, ಕುಡ್ಸೆಂಪ್ ಯೋಜನೆಯ ನಿರ್ದೇಶಕನಾಗಿದ್ದ ನಾನು 2009ರಲ್ಲಿ ವರ್ಗಾವಣೆಗೊಂಡಿದ್ದು, ವರ್ಗಾವಣೆಗೊಂಡ ಮೂರು ವರ್ಷಗಳ ಬಳಿಕ ಹಗರಣವನ್ನು ನಡೆಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ಈ ಹರಣಗಳು ನಡೆದಿದ್ದೆ ಆದಲ್ಲಿ 2011 ರಿಂದ 2014 ರವರೆಗೆ ಬಿಜೆಪಿ ಅಧಿಕಾರವಾಧಿಯಲ್ಲಿ ನಡೆದಿರಬೇಕು ಎಂದು ಆರೋಪಿಸಿದರು.
ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಮುಂಬರುವ ದಿನಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು. ಮಾಧ್ಯಮಗಳು ಕೂಡ ಆಧಾರ ರಹಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದು, ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನನ್ನ ವಿರುದ್ದ ಆಧಾರ ರಹಿತ ಸುಳ್ಳು ಸುದ್ದಿ ಬಿತ್ತರಿಸಿ ಮಾನಸಿಕವಾಗಿ ಕುಗ್ಗಿಸಲು ಯತ್ನಿಸಿದೆ. ಇದೆಲ್ಲಾ ಪ್ರತಿಪಕ್ಷದ ತಂತ್ರಗಾರಿಕೆ ಎಂದು ಜೆ.ಆರ್ ಲೋಬೋ ಹೇಳಿದರು.

ಸುಳ್ಳು ಸುದ್ದಿ ಬಿತ್ತರಿಸಿದ ಖಾಸಗಿ ಸುದ್ದಿ ವಾಹಿನಿ ವಿರುದ್ಧ ತಾನು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದಿಂದ ನನ್ನ ವಿರುದ್ಧ ಯಾವುದೇ ರೀತಿಯ ಸುದ್ದಿಯನ್ನು ಬಿತ್ತರಿಸದಂತೆ ತಡೆಯಾಜ್ಞೆ ತಂದಿದ್ದೇನೆ ಎಂದು ತಿಳಿಸಿದರು.












Click it and Unblock the Notifications