ಎರಡು ದೇವಾಲಯಗಳನ್ನು ದತ್ತು ತೆಗೆದುಕೊಳ್ಳಲಿದೆ ಕುಕ್ಕೆ
ದಕ್ಷಿಣ ಕನ್ನಡ, ಜನವರಿ 25 : ಕುಕ್ಕೆ ಸುಬ್ರಮಣ್ಯ ದೇವಾಲಯ ಎರಡು ದೇವಾಲಯಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲಿದೆ. ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಕುಕ್ಕೆ ಪ್ರಥಮ ಸ್ಥಾನದಲ್ಲಿದೆ.
ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾರ ಪೂಜಾರಿ ಈ ಕುರಿತು ಮಾಹಿತಿ ನೀಡಿದರು. "ಪುತ್ತೂರಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಬೆಳ್ತಂಗಡಿಯ ಶ್ರೀ ಸೋಮೇಶ್ವರ ದೇವಾಲಯವನ್ನು ಕುಕ್ಕೆ ಸುಬ್ರಮಣ್ಯ ದೇವಾಲಯ ದತ್ತು ತೆಗೆದುಕೊಳ್ಳಲಿದೆ" ಎಂದು ಹೇಳಿದರು.
"ಎರಡೂ ದೇವಾಲಯಗಳನ್ನು ಸುಮಾರು 50 ಲಕ್ಷ ವೆಚ್ಚದಲ್ಲಿ ಕುಕ್ಕೆ ಸುಬ್ರಮಣ್ಯ ದೇವಾಲಯ ಅಭಿವೃದ್ಧಿ ಮಾಡಲಿದೆ. ದೇವಾಲಯಗಳ ಮನವಿಯ ಮೇರೆಗೆ ದತ್ತು ತೆಗೆದುಕೊಳ್ಳುವ ದೇವಾಲಯಗಳನ್ನು ಆಯ್ಕೆ ಮಾಡಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.

ಕುಕ್ಕೆ ಸುಬ್ರಮಣ್ಯ ದೇವಾಲಯ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. 2019ರಲ್ಲಿ ದೇವಾಲಯ 100 ಕೋಟಿ ಆದಾಯಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ದೇವಾಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ದೇವಾಲಯದ ಆಡಳಿತ ಮಂಡಳಿ ಹೇಳಿತ್ತು.
2018ರಲ್ಲಿಯೂ ಕುಕ್ಕೆ ಸುಬ್ರಮಣ್ಯ ದೇವಾಲಯ 92 ಕೋಟಿ ರೂ. ಆದಾಯಗಳಿಸಿ ಆದಾಯದಲ್ಲಿ ಪ್ರಥಮ ಸ್ಥಾನಗಳಿಸಿತ್ತು. ಪ್ರತಿನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳನ್ನು ಪೂಜಿಸುತ್ತಾರೆ.












Click it and Unblock the Notifications