ಮತ್ತೆ ಭುಗಿಲೆದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸರ್ಪ ಸಂಸ್ಕಾರ, ಆಶ್ಲೇಷ ಪೂಜಾ ವಿವಾದ
ಮಂಗಳೂರು, ಸೆಪ್ಟೆಂಬರ್. 24: ಸ್ವಲ್ಪದಿನ ತಣ್ಣಗಿದ್ದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪೂಜಾ ವಿಧಿ ವಿಧಾನ ವಿವಾದ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಭುಗಿಲೆದ್ದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯನ್ನು ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನಡೆಸುತ್ತಿರುವ ಬಗ್ಗೆ ವಿವಾದ ಇದೀಗ ಮತ್ತೆ ಗರಿಗೆದರಿದೆ.
ನರಸಿಂಹ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಅವರ ಪರವಾಗಿರುವರು ಸೇರಿಕೊಂಡು ಮತ್ತೆ ಮಠದ ಹಾಗೂ ಸ್ವಾಮೀಜಿಯ ಪರವಾಗಿ ಪ್ರಚಾರ ಆರಂಭಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸುಬ್ರಹ್ಮಣ್ಯ ಕ್ಷೇತ್ರದ ದೇವಾಲಯಕ್ಕಿಂತ ಸಂಪುಟ ನರಸಿಂಹ ಮಠದಲ್ಲೇ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆ ನಡೆಸಿದರೆ ಮಾತ್ರ ದೇವರಿಗೆ ಸಮರ್ಪಣೆಯಾಗುತ್ತದೆ ಎನ್ನುವ ಹೇಳಿಕೆಗಳನ್ನು ಸ್ವಾಮೀಜಿಯ ಹಿಂಬಾಲಕರು ನೀಡಲಾರಂಭಿಸಿದ್ದಾರೆ.

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಮತ್ತೆ ಆರಂಭವಾಗಿದೆ. ಹಿಂದೂ ಸಂಘಟನೆಗಳ ಕೆಲ ಮುಖಂಡರು ಮಠವನ್ನು ಸಮರ್ಥಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಂಪುಟ ನರಸಿಂಹ ಮಠದ ಸ್ವಾಮೀಜಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿರುದ್ಧವಾಗಿಯೇ ಮಾತನಾಡಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿದ್ದ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯನ್ನು ನರಸಿಂಹ ಮಠದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನುವ ಆರೋಪದ ನಡುವೆಯೇ ಮಠದ ಸ್ವಾಮೀಜಿಗಳು ತಮ್ಮ ಮಠದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಮರ್ಥಿಸುವ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ದೂರಲಾಗುತ್ತಿದೆ.
ಚಾತುರ್ಮಾಸದಲ್ಲಿರುವಾಗಲೇ ಪೂಜಾ ವಿವಾದವನ್ನು ಬಳಸಿಕೊಂಡಿರುವ ಸ್ವಾಮೀಜಿ ಸುದರ್ಮ ಕಾರ್ಯಕ್ರಮದ ಮೂಲಕ ತನ್ನ ನಿಲುವನ್ನು ಸಮಾಜದ ಮುಂದಿಡಲು ಆರಂಭಿಸಿದ್ದು, ಈ ಬೆಳವಣಿಗೆ ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.
ಪರ ಹಾಗೂ ವಿರೋಧ ಚರ್ಚೆಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಈ ನಡುವೆ ದೇವಾಲಯವನ್ನು ಮಠಕ್ಕೆ ನೀಡುವ ಬದಲು ಸುಬ್ರಹ್ಮಣ್ಯನ ಮೂಲ ಅರಾಧಕರಾದ ಮಲೆಕುಡಿಯರಿಗೆ ವಹಿಸಬೇಕೆನ್ನುವ ವಾದ ಕೂಡ ಕೇಳಿಬರುತ್ತಿದೆ.
ಸುಬ್ರಹ್ಮಣ್ಯ ದೇವಾಲಯ ಹಾಗು ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಬಹಿರಂಗವಾಗಿ ಅಷ್ಟಮಂಗಲ ಪ್ರಶ್ನೆಗೆ ವ್ಯವಸ್ಥೆಮಾಡಿ ಅಮಾಯಕ ಭಕ್ತರ ಗೊಂದಲ ನಿವಾರಿಸಬೇಕೆಂಬ ಕೂಗು ಕೂಡ ಕೇಳಿಬರುತ್ತಿದೆ .
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಇರುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯ ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಈ ಪೂಜಾ ವಿಧಿವಿಧಾನದ ಸಂಘರ್ಷದಲ್ಲಿ ಭಕ್ತಾದಿಗಳು ಮಾತ್ರ ಗೊಂದಲದಲ್ಲಿದ್ದಾರೆ.












Click it and Unblock the Notifications