'ಕುಮಾರಸ್ವಾಮಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮುಖ್ಯಮಂತ್ರಿ'
ಮಂಗಳೂರು, ಜೂನ್ 20 : 'ಮೈತ್ರಿ ಸರಕಾರದ ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮುಖ್ಯಮಂತ್ರಿಯಾಗಿದ್ದು, ಆಡಳಿತದಲ್ಲಿ ನಿಯಂತ್ರಣವೇ ಅವರಿಗಿಲ್ಲ' ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಬುಧವಾರ ಅವರು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

'ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಅತೃಪ್ತರು ಸೇರಿ ರಚಿಸಿದ ಸರಕಾರವಾಗಿದ್ದು, ಎಲ್ಲರ ನಡುವೆಯೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಒಬ್ಬರ ಇಲಾಖೆಯಲ್ಲಿ ಇನ್ನೊಬ್ಬರು ಮೂಗು ತೂರಿಸುವ ಕೆಲಸ ನಡೆಯುತ್ತಿದೆ. ಈ ಸರಕಾರ ಹೆಚ್ಚು ಸಮಯ ಅಧಿಕಾರದಲ್ಲಿರಲು ಸಾಧ್ಯವಿಲ್ಲ' ಎಂದು ಭವಿಷ್ಯ ನುಡಿದರು.
'ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಜಯಗಳಿಸಿದ ಬಿಜೆಪಿ ಅಧಿಕ ಸೀಟುಗಳನ್ನು ಪಡೆದಿದೆ ಈ ಕಾರಣದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರೇ ಪ್ರದಾನಿಯಾಗಬೇಕು ಎನ್ನುವ ಪ್ರಾರ್ಥನೆಯೊಂದಿಗೆ ತುಲಾಭಾರ ನಡೆಸಿರುವುದಾಗಿ' ತಿಳಿಸಿದರು.












Click it and Unblock the Notifications