ಮಂಗಳೂರು; ಅರಬ್ಬೀ ಸಮುದ್ರ ತೀರದಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ಮಂಗಳೂರು, ಅಕ್ಟೋಬರ್, 28; ಮಂಗಳೂರು ನಗರದ ಅರಬ್ಬೀ ಸಮುದ್ರದ ಕಿನಾರೆಯಲ್ಲಿ 50ರಷ್ಟು ಬೋಟ್ಗಳಲ್ಲಿ ಒಂದೂವರೆ ಗಂಟೆಯವರೆಗೂ ಕೋಟಿ ಕಂಠ ಗಾಯನ ಸೊಗಸಾಗಿ ಮೂಡಿ ಬಂದಿದೆ.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮುಂದಾಳತ್ವದಲ್ಲಿ ಮೀನುಗಾರಿಕಾ ಇಲಾಖೆ, ಮೊಗವೀರ ಸಮಾಜದ ಸಹಯೋಗದಲ್ಲಿ ಈ ಕೋಟಿಕಂಠ ಗಾಯನ ಮೂಡಿ ಬಂದಿದೆ. ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ ಬೋಟ್ಗಳು ತೋಟ ಬೆಂಗ್ರೆ ಅಳಿವೆ ಬಾಗಿಲುವರೆಗೆ 8 ಕಿಲೋ ಮೀಟರ್ ಸಾಗಿದ್ದು, ಈ ಮೂಲಕ ಕನ್ನಡದ ಆರು ಹಾಡುಗಳನ್ನು ಹಾಡಲಾಯಿತು.
5 ಪರ್ಸಿನ್ ಬೋಟ್ಗಳು, 10 ಆಳ ಸಮುದ್ರ ಮೀನುಗಾರಿಕಾ ಬೋಟ್ಗಳು, 25 ನಾಡ ದೋಣಿಗಳು, 10 ಕರೆ ಮಿನುಗಾರಿಕೆ ಬೋಟ್ಗಳು ಹಾಗೂ 4 ಫೆರಿ ಬೋಟ್ಗಳಲ್ಲಿ ಕೋಟಿ ಕಂಠಗಾಯನ ಮೂಡಿತು. ಎಲ್ಲಾ ಬೋಟ್ಗಳು ಸಂಪೂರ್ಣ ಶೃಂಗಾರಗೊಂಡು ಕನ್ನಡದ ಬಾವುಟಗಳಿಂದ ರಾರಾಜಿಸಿದ್ದವು. ಜನರು ಸಮುದ್ರ ನಡುವಿನ ಸೊಗಸನ್ನು ವೀಕ್ಷಿಸುತ್ತ ಬೋಟ್ಗಳಲ್ಲಿ ಕೋಟಿ ಕಂಠಗಾಯನ ಮೂಡಸಿದ್ದಾರೆ. ಅದರಲ್ಲಿಯೂ ತುಳು ಬಾವುಟವೂ ರಾರಾಜಿಸಿದ್ದು, ವಿಶೇಷವಾಗಿದೆ.

ಬೋಟ್ಗಳಲ್ಲಿ ಕೋಟಿ ಕಂಠ ಗಾಯನ; 11 ಗಂಟೆಗೆ ಬೋಟ್ಗಳಲ್ಲಿ ಕೋಟಿ ಕಂಠ ಗಾಯನದ ಮೊದಲ ಹಾಡು ಆರಂಭವಾಗಿದ್ದು, ಆರು ಹಾಡುಗಳು ಸೊಗಸಾಗಿ ಮೂಡಿ ಬಂದಿವೆ. ಕೊನೆಗೆ ತುಳು ಭಾಷೆಯ ಹಾಡನ್ನು ಹಾಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಪೂರ್ಣಿಮಾ, ಮಂಗಳೂರು ಮನಪಾ ಸದಸ್ಯರು, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಆಸಕ್ತರು ಸೇರಿದಂತೆ 500ಕ್ಕೂ ಅಧಿಕ ಜನ ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದರು. ಅಲ್ಲದೆ "ಕೋಟಿ ಕಂಠ ಗಾಯನ"ಕ್ಕೂ ಮುನ್ನ ಸುಲ್ತಾನ್ ಬತ್ತೇರಿಯ ಕಡಲ ಕಿನಾರೆಯಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಮೂಹ ಗಾನ, ದೇಶಭಕ್ತಿಗೀತೆ, ನಾಡಗೀತೆಗಳ ಗಾಯನ ನೆರವೇರಿತು.

ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳು; ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ಪೆಣಂಬೂರು ಕಡಲಕಿನಾರೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಬಿಸಿಲಿನ ತಾಪಕ್ಕೆ 25ಕ್ಕೂ ಅಧಿಕ ವಿಧ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್, ಶಾಸಕ ಡಾ. ವೈ. ಭರತ್ ಶೆಟ್ಟಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದರು.












Click it and Unblock the Notifications