'ಬಂಗಾರ್ದ ಪರ್ಬದ ಕೆಸರ್ದ್ ಗೊಬ್ಬುಲು': ಕೆಸರಿನಲ್ಲಿ ಮಿಂದೆದ್ದ ಮಂಗಳೂರಿನ ಜನ
ಮಂಗಳೂರು, ಅಕ್ಟೋಬರ್ 17: ಗದ್ದೆ ತುಂಬಾ ಕೆಸರು, ಕೆಸರಿನ ನಡುವೆ ವಿವಿಧ ಸ್ಪರ್ಧೆಗಳು, ಕೆಸರಲ್ಲಿ ಎದ್ದು ಬಿದ್ದು ಹೊರಳಾಡಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಮಕ್ಕಳು, ಮಹಿಳೆಯರು, ಯುವಕರು ಮಂಗಳೂರು ನಗರದ ಪಂಪ್ ವೆಲ್ ಗರೋಡಿ ಬಳಿ ನಿನ್ನೆ (ಅಕ್ಟೋಬರ್ 16) ರಂದು ಈ ಸನ್ನಿವೇಶಗಳು ಕಂಡುಬಂದವು.
ಸಂಸ್ಥೆಯೊಂದರ ಸುವರ್ಣಮಹೋತ್ಸವದ ಸಂಭ್ರಮವನ್ನು ಈ ರೀತಿಯಲ್ಲೂ ಆಚರಿಸಬಹುದು ಎನ್ನುವುದನ್ನು ಮಂಗಳೂರಿನ ಗರೋಡಿಯಲ್ಲಿ ನಡೆದ ಕಾರ್ಯಕ್ರಮ ತೋರಿಸಿಕೊಟ್ಟಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಅಲ್ಲಲ್ಲಿ ಕೆಸರು ಗದ್ದೆಯ ಕ್ರೀಡಾಕೂಟಗಳು ನಡೆಯುವುದು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಕಾರ್ಯಕ್ರಮಕ್ಕೆ ಕೆಸರು ಗದ್ದೆ ಕ್ರೀಡಾಕೂಟ ಸಾಕ್ಷಿಯಾಗಿದೆ.

ಮಂಗಳೂರಿನ ಪಂಪ್ವೆಲ್ನ ಕಂಕನಾಡಿ ಗರೋಡಿ ಬಳಿಯ ಗಣೇಶಪುರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನದ ಸುವರ್ಣಮಹೋತ್ಸವದ ಹಿನ್ನೆಲೆಯಲ್ಲಿ ಬಂಗಾರ್ದ ಪರ್ಬದ ಕೆಸರ್ದ್ ಗೊಬ್ಬುಲು' ಎನ್ನುವ ಕೆಸರು ಗದ್ದೆ ಕ್ರೀಡಾಕೂಟ ನಡೆದಿದೆ.
ನಿನ್ನೆ ಅಕ್ಟೋಬರ್ 16ರ ಬೆಳಗ್ಗೆನಿಂದಲೇ ಆರಂಭಗೊಂಡ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. ಮಕ್ಕಳು, ಮಹಿಳೆಯರು, ಪುರುಷರಿಗೆ ವೈವಿಧ್ಯಮಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಎಲ್ಲಾ ಬಗೆಯ ಜಂಜಾಟಗಳನ್ನು ಮರೆತು ಗರೋಡಿ ಭಾಗದ ಸುತ್ತಮುತ್ತಲಿನ ನೂರಾರು ಜನರು ಈ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗಿಯಾದರು. ಬಹಳ ಖುಷಿಯಿಂದಲೇ ಪಾಲ್ಗೊಂಡು ಕೆಸರು ಮಣ್ಣಿನ ಸೊಗಡನ್ನು ಆನಂದಿಸಿದರು. ವಿಶೇಷವಾಗಿ ಮಕ್ಕಳು ಯುವಕರು ಹಾಗೂ ಮೊಬೈಲ್ ಗುಂಗಿನಿಂದ ಹೊರಬಂದು ಕೆಸರು ಮಣ್ಣಿನಲ್ಲಿ ಆಟವಾಡಿ ಖುಷಿಪಟ್ಟರು.

ಗಣೇಶಪುರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 50ನೇ ವರ್ಷದ ಗಣೇಶೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸುವ ಜೊತೆಗೊಂದು ಸ್ಮರಣೀಯ ಕಾರ್ಯಕ್ರಮ ಮಾಡಬೇಕೆನ್ನುವ ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಟೀಮ್ ಗರೋಡಿ ತಂಡದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ 15ಕ್ಕೂ ಅಧಿಕ ಸಂಘ ಸಂಸ್ಥೆಗಳ ಸದಸ್ಯರು ಸಾಥ್ ನೀಡಿದ್ದಾರೆ. ಒಟ್ಟಾರೆ ಬಂಗಾರ್ದ ಪರ್ಬದ ಕೆಸರ್ದ್ ಗೊಬ್ಬುಲು' ಕಾರ್ಯಕ್ರಮ ಎಲ್ಲರಿಗೂ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications