ತೊಗರಿ ಬೇಳೆ ದಾಸ್ತಾನಿಗೆ ಸರ್ಕಾರದ ಕಡಿವಾಣ
ಮಂಗಳೂರು, ಜುಲೈ 07 : ತೊಗರಿ ಬೇಳೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಸರ್ಕಾರ ಬೇಳೆ ದಾಸ್ತಾನಿಗೆ ನಿಯಮಾವಳಿ ರೂಪಿಸಿದೆ. ಸರ್ಕಾರದ ನಿಯಮ ಮೀರಿ ಹೆಚ್ಚು ದಾಸ್ತಾನು ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಆಹಾರ ಮತ್ತು ನಾಗರಿಕಾ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದರು. ಬುಧವಾರ ಸಂಜೆ ಮಂಗಳೂರಿನಲ್ಲಿ ಮಾತನಾಡಿದ ಅವರು, 'ಅಗತ್ಯವಿರುವ ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದರು. [ಎಪಿಎಂಸಿಯಲ್ಲಿ 130 ರೂ.ಗಳಿಗೆ ತೊಗರಿ ಬೇಳೆ ಲಭ್ಯ]

'ರಾಜ್ಯದ ಎಲ್ಲಾ ಚಿಲ್ಲರೆ ಅಂಗಡಿಗಳಲ್ಲಿ 50, ಗ್ರಾಮೀಣ ಭಾಗದ ಸಗಟು ವ್ಯಾಪಾರಿಗಳು 1000 ಮತ್ತು ನಗರ ಪ್ರದೇಶದ ಸಗಟು ವ್ಯಾಪಾರಿಗಳು 2000 ಕ್ವಿಂಟಾಲ್ ತೊಗರಿ ಬೇಳೆ ದಾಸ್ತಾನು ಮಾಡಬಹುದು. ಇದಕ್ಕಿಂತ ಹೆಚ್ಚು ಸಂಗ್ರಹ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಸಚಿವರು ಎಚ್ಚರಿಸಿದರು. [ಅಬ್ಬಾ...ದ್ವಿಶತಕದ ಗಡಿಬಿಟ್ಟು ಕೆಳಗಿಳಿದ ಬೇಳೆ ಕಾಳು]
'ದೇಶದಲ್ಲಿ ತೊಗರಿಬೇಳೆ, ಸಕ್ಕರೆ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆಯ ಹಿನ್ನಲೆಯಲ್ಲಿ ನಿಯಮಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಸಂಗ್ರಹಿಸಿರುವವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಪ್ರೋಟೀನ್ ಯುಕ್ತ ತೊಗರಿ ಬೇಳೆಯನ್ನು ಕೆಜಿಗೆ 130 ರೂ. ದರದಲ್ಲಿ ಮಾರಾಟ ಮಾಡುವಂತೆ ಎಪಿಎಂಸಿಗಳಿಗೆ ಆದೇಶ ನೀಡಲಾಗಿದೆ' ಎಂದು ಸಚಿವರು ಹೇಳಿದರು. [ಬೇಳೆಕಾಳು ಖರೀದಿಗೆ ಟೆಂಡರ್ ಆಹ್ವಾನಿಸಿದ ರಾಜ್ಯ ಸರ್ಕಾರ]
'ಸರ್ಕಾರ ನಿಗದಿಪಡಿಸಿದ ಬೆಲೆಗೆ ಸ್ವಲ್ಪ ಲಾಭಾಂಶ ಇಟ್ಟುಕೊಂಡು ತೊಗರಿ ಬೇಳೆ ಮಾರಾಟ ಮಾಡಬಹುದು. ಆದರೆ, ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲ' ಎಂದು ಸ್ಪಷ್ಟಪಡಿಸಿದರು. 130 ರೂ. ದರದಲ್ಲಿ ಮೂರು ತಿಂಗಳ ಅವಧಿಗೆ ಮಾತ್ರ ತೊಗರಿ ಬೇಳೆ ದೊರೆಯಲಿದೆ. ಈ ಬಳಿಕ ಹೊಸ ತೊಗರಿ ಮಾರುಕಟ್ಟೆಗೆ ಬರುವುದರಿಂದ ಬೆಲೆ ಕಡಿಮೆಯಾಗಲಿದೆ' ಎಂದರು.
ಅಂದಹಾಗೆ ರಾಜ್ಯದ 144 ಎಪಿಎಂಸಿಗಳಲ್ಲಿ ಗ್ರೇಡ್ - 1 ಬೇಳೆ ಪ್ರತಿ ಕೆಜಿಗೆ ರೂ. 145 ಮತ್ತು ಗ್ರೇಡ್ -2 ಬೇಳೆ ಪ್ರತಿ ಕೆಜಿಗೆ ರೂ. 130 ದರದಲ್ಲಿ ಮಾರಾಟ ಮಾಡಲಾಗುತ್ತದೆ. ಜುಲೈ 8ರಿಂದ ಎಂಪಿಎಂಸಿಗಳಲ್ಲಿ ಈ ದರದಲ್ಲಿ ಬೇಳೆ ಲಭ್ಯವಾಗುತ್ತದೆ.












Click it and Unblock the Notifications