ಮುಸ್ಲಿಮರ ಪರ ನಿಂತ ಮೂಡುಬಿದಿರೆ ಬಿಜೆಪಿ ಶಾಸಕ: ತಮ್ಮ ಪಕ್ಷದ ನಾಯಕರಿಗೆ ಮಣಿಯುವುದಿಲ್ಲ ಎಂದ ಉಮಾನಾಥ ಕೋಟ್ಯಾನ್- ವರದಿ, ವಿವರ
ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಮುಸ್ಲಿಮರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಕರಾವಳಿಯ ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಬಿಜೆಪಿಗೆ ಮುಜುಗರ ಉಂಟು ಮಾಡಿದೆ ಎನ್ನಲಾಗುತ್ತಿದೆ.
ಮೂಡುಬಿದಿರೆಮ ಮಾರ್ಚ್ 15: ಅಲ್ಪಸಂಖ್ಯಾತರ ವಿರುದ್ಧ ಯಾವುದೇ ತಾರತಮ್ಯ ಮಾಡದೆ ಜಾತ್ಯತೀತವಾಗಿ ಕೆಲಸ ಮಾಡುವ ಬಗ್ಗೆ ಮೂಡುಬಿದಿರೆ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ ನೀಡಿದ್ದಾರೆ. ಕರಾವಳಿಯ ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಬಿಜೆಪಿಗೆ ಮುಜುಗರ ಉಂಟು ಮಾಡಿದೆ ಎನ್ನಲಾಗುತ್ತಿದೆ. ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಹಿಂದುತ್ವದ ಅಲೆ ಇರುವುದರಿಂದ ಕೋಟ್ಯಾನ್ ಅವರ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.
ಕಳೆದ ವಾರ ಮಂಗಳೂರು ಸಮೀಪದ ಕಿನ್ನಿಗೋಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, 'ಬಿಜೆಪಿ ನಾಯಕರ ಕೆಲವು ಅಭಿಪ್ರಾಯಗಳಿಗೆ ನಾನು ಮಣಿಯುವುದಿಲ್ಲ ಎಂದು ಹೇಳಿದ್ದಾರೆ.

'ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ನಮಗೆ ಮತ ಹಾಕುವುದಿಲ್ಲ. ನಾವು ಅವರ ಕೆಲಸವನ್ನು ಏಕೆ ಮಾಡಬೇಕು ಎಂದು ಬಿಜೆಪಿ ಕೆಲ ನಾಯಕರು ಹೇಳುತ್ತಾರೆ. ಇದನ್ನು ಬೇರೆ ಯಾರೂ ಹೇಳುವುದಿಲ್ಲ, ಉಮಾನಾಥ್ ಕೋಟ್ಯಾನ್ ಮಾತ್ರ ಹೇಳುತ್ತಾರೆ. ಏಕೆಂದರೆ ನಾನು ನೇರ ಮಾತುಗಾರ' ಎಂದು ಕೋಟ್ಯಾನ್ ತಮ್ಮ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
'ನಮ್ಮ ಪಕ್ಷದ ಮುಖಂಡರಿಗೆ ದುರಹಂಕಾರವಿದೆ. ಮುಸ್ಲಿಮರು ನಮಗೆ ಮತ ಹಾಕದ ಕಾರಣ ಅವರ ಕೆಲಸವನ್ನು ನಾವೇಕೆ ಮಾಡಬೇಕು ಎಂದು ಕೇಳುತ್ತಾರೆ. ನಾನು ಈ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಸಣ್ಣ ಸಭೆಯೊಂದರಲ್ಲಿ ಹೇಳಿದ್ದಾರೆ.

ತಾವು ಶಾಸಕರಾಗಿದ್ದ ಅವಧಿಯಲ್ಲಿಯೂ ಮಸೀದಿಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಕೋಟ್ಯಾನ್ ತಿಳಿಸಿದ್ದಾರೆ.
'ಕಳೆದ ಐದು ವರ್ಷಗಳಲ್ಲಿ, ನನ್ನ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಭೆಗಳು ಅಥವಾ ಪ್ರಚೋದನಕಾರಿ ಭಾಷಣಗಳು ನಡೆದಿವೆಯೇ?' ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಕರ್ನಾಟಕದ ಭಾಗಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಅವರು ಈ ಮಾತುಗಳನ್ನು ಹೇಳುತ್ತಿರುವುದು ಕಂಡುಬಂದಿದೆ.
ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿಯ ಕೆಲವು ಹಿಂದುಪರ ಸಂಘಟನೆಗಳು ಈ ಭಾಷಣ ವಿರುದ್ಧ ಅಸಮಾಧಾನ ಹೊಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ 'ಅಭಿಯಾನ' ಆರಂಭಿಸಲಾಗಿದೆ. 2018 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರ ವಿರುದ್ಧ ಮೂಡುಬಿದಿರೆ ಕ್ಷೇತ್ರದ ಕೆಲವು ಭಾಗಗಳಲ್ಲಿ ಭಾಷಣವನ್ನು ಟೀಕಿಸುವ ಪೋಸ್ಟ್ಗಳನ್ನು ಹಂಚಲಾಗುತ್ತಿದೆ. ಆನ್ಲೈನ್ ಮೂಲಕ ಕೋಟ್ಯಾನ್ ವಿರುದ್ದ ಸಂದೇಶ ರವಾನಿಸಲಾಗುತ್ತಿದೆ.
ಈ ಅಭಿಯಾನವನ್ನು ಹಿಂದೂ ಜಾಗರಣ ವೇದಿಕೆ ಕೈಗೊಂಡಿದೆ ಎನ್ನಲಾಗುತ್ತಿದೆ. ಘಟಕದ ಸ್ಥಳೀಯ ಮುಖಂಡರು ಈ ಅಭಿಯಾನದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ.
'ಅವರ ಭಾಷಣವು ಸಂದರ್ಭಕ್ಕೆ ತಕ್ಕನಾಗಿ ಇರಬಹುದು. ಅವರು ಹೇಳಿಕೆಯನ್ನು ಟೀಕಿಸಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡುತ್ತೇವೆ' ಎಂದು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ಮುಖಂಡ ಸಂಯುಕ್ತ ರಾಜ್ ಹೇಳಿದ್ದಾರೆ.












Click it and Unblock the Notifications