ಕಬೀರ್ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ಮಂಗಳೂರು, ಮೇ 31 : ಶೃಂಗೇರಿಯಲ್ಲಿ ಎಎನ್ಎಫ್ ಸಿಬ್ಬಂದಿ ಗುಂಡಿಗೆ ಬಲಿಯಾದ ಕಬೀರ್ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ 10 ಲಕ್ಷ ಪರಿಹಾರವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಕಬೀರ್ ನ್ಯಾಯ ಒಕ್ಕೂಟದ ಕಾರ್ಯಕರ್ತರು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.
ಶುಕ್ರವಾರ ಕಬೀರ್ ನ್ಯಾಯ ಒಕ್ಕೂಟ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಜಾಥಾ ನಡೆಸಿತು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಭೆ ನಡೆಸಿ, ಸರ್ಕಾರ ಶೂಟೌಟ್ ನಲ್ಲಿ ಮೃತಪಟ್ಟ ಕಬೀರ್ ಕುಟುಂಬಕ್ಕೆ ಘೋಷಿಸಿದ 10 ಲಕ್ಷ ರೂ.ಗಳ ಪರಿಹಾರವನ್ನು ತಕ್ಷಣ ಅವರಿಗೆ ನೀಡಬೇಕು ಎಂದು ಆಗ್ರಹಿಸಿದರು. ಚಿತ್ರಗಳಲ್ಲಿ ನೋಡಿ ಪ್ರತಿಭಟನೆ

10 ಲಕ್ಷ ಪರಿಹಾರವನ್ನು ತಕ್ಷಣ ನೀಡಿ
ಶೃಂಗೇರಿಯಲ್ಲಿ ಎಎನ್ಎಫ್ ಸಿಬ್ಬಂದಿ ಗುಂಡಿಗೆ ಬಲಿಯಾದ ಕಬೀರ್ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ 10 ಲಕ್ಷ ಪರಿಹಾರವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಕಬೀರ್ ನ್ಯಾಯ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೃಹತ್ ಪ್ರತಿಭಟನಾ ಜಾಥಾ
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಜಾಥಾ ನಡೆಸಿದ ಕಾರ್ಯಕರ್ತರು, ಘಟನೆ ಬಗ್ಗೆ ಬೇಜಾವಾಬ್ದಾರಿ ಹೇಳಿಕೆ ನೀಡಿದ ಶಾಸಕರಾದ ಸಿ.ಟಿ. ರವಿ ಹಾಗೂ ಸುನಿಲ್ ಕುಮಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.

ಕಬೀರ್ ಕುಟುಂಬಕ್ಕೆ ನ್ಯಾಯ ಕೊಡಿ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ "ಕಬೀರ್ ಕುಟುಂಬಕ್ಕೆ ಸರ್ಕಾರ ಭಿಕ್ಷೆ ನೀಡುತ್ತಿಲ್ಲ. ಪರಿಹಾರ ಪಡೆಯುವುದು ಆ ಕುಟುಂಬದ ಹಕ್ಕು. ಆದ್ದರಿಂದ ಕಬೀರ್ ಕುಟುಂಬಕ್ಕೆ ನ್ಯಾಯ ದೊರೆಯಬೇಕು" ಎಂದರು.

ಸಚಿವರ ವಿರುದ್ಧ ಹೋರಾಟ ನಡೆಸುತ್ತೇವೆ
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಯು.ಟಿ. ಖಾದರ್, ರಮಾನಾಥ ರೈ, ವಿನಯ್ ಕುಮಾರ್ ಸೊರಕೆ ಮತಾಂಧ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಎಡವಿದ್ದಾರೆ. ಆದ್ದರಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಕಬೀರ್ ಕುಟುಂಬಕ್ಕೆ ನ್ಯಾಯ ದೊರಕದೇ ಇದ್ದರೆ ಮುಂದೆ ಜಿಲ್ಲೆಯ ಸಚಿವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಾರು ಭಾಗವಹಿಸಿದ್ದರು
ಮಂಗಳೂರು ಜಿಲ್ಲಾ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ವಿಲಿಯಂ ಮಾರ್ಟಿಸ್, ಜ್ಯೋತಿ ಗುರುಪ್ರಸಾದ್, ಪಿ.ಬಿ. ಡೇಸಾ, ವಾಸುದೇವ ಬೋಳೂರು, ಆಲಿ ಹಸನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications