ಡಿಸೆಂಬರ್ 24, 25ರಂದು ಮಂಗಳೂರಲ್ಲಿ 'ಜನನುಡಿ' ಸಾಹಿತ್ಯ ಸಮಾವೇಶ
ಮಂಗಳೂರಿನಲ್ಲಿ ಡಿಸೆಂಬರ್ 24, 25ರಂದು ಜನನುಡಿ ಸಾಹಿತ್ಯ ಸಮಾವೇಶ ನಡೆಯಲಿದೆ. ಸಮಾವೇಶದ ಮಾಹಿತಿ, ಗೋಷ್ಠಿಗಳು ಮತ್ತಿತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಮಂಗಳೂರು, ಡಿಸೆಂಬರ್ 13: ಸಾಹಿತ್ಯವನ್ನು ವ್ಯಾಪಾರವನ್ನಾಗಿಸುತ್ತಿರುವ ವೈಭವದ ಸಾಹಿತ್ಯ ಜಾತ್ರೆಗಳನ್ನು ವಿರೋಧಿಸಿ ಪ್ರತಿವರ್ಷ ಮಂಗಳೂರಲ್ಲಿ 'ಜನನುಡಿ'ಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಸಮಾನಮನಸ್ಕರು ಒಗ್ಗೂಡಿ ಹಣ ಸಂಗ್ರಹ ಮಾಡಿ, ನಡೆಸುತ್ತಿರುವ ಜನಪರ ಸಾಹಿತ್ಯ ಸಮಾವೇಶ. ಈ ಸಲದ ಸಮಾವೇಶ ಡಿಸೆಂಬರ್ 24, 25ರಂದು ಮಂಗಳೂರಿನ ನಂತೂರಿನಲ್ಲಿರುವ ಶಾಂತಿಕಿರಣದಲ್ಲಿ ನಡೆಯಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾಹಿತಿಗಳು, ಚಳವಳಿಗಾರರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಭಿಮತ ಮಂಗಳೂರು ಬಳಗವು ಪ್ರಗತಿಪರ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು ಮತ್ತು ಜನಪರ ಸಂಘಟನೆಗಳ ಜತೆಗೂಡಿ ಮಂಗಳೂರಿನಲ್ಲಿ ಕಳೆದ 3 ವರ್ಷಗಳಿಂದ ಜನನುಡಿಯನ್ನು ನಡೆಸುತ್ತಾ ಬಂದಿವೆ.[ಜೈಪುರ ಸಾಹಿತ್ಯ ಉತ್ಸವಕ್ಕೆ ಅತಿಥಿಯಾಗಿ ಎಸ್.ಎಲ್ ಭೈರಪ್ಪ]

ಜನನುಡಿ ಎಂಬುದು ಕೇವಲ ಪರ್ಯಾಯ ಅಲ್ಲ, ಅದೊಂದು ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ಸಾಹಿತ್ಯದ ಪಾತ್ರದ ಬಗೆಗಿನ ಗಂಭೀರ ಚರ್ಚೆಯಾಗಿದೆ. ಡಿಸೆಂಬರ್ 24ರಂದು ಆರಂಭಗೊಳ್ಳುವ ಈ ಬಾರಿಯ ಜನನುಡಿಯನ್ನು ತಮ್ಮ ಆತ್ಮಕತೆ 'ಅಕ್ರಮ ಸಂತಾನ'ದ ಮೂಲಕ ಸಾಮಾಜಿಕ ಸಂಚಲನ ಮೂಡಿಸಿದ್ದ ಪ್ರಖ್ಯಾತ ಮರಾಠಿ ಸಾಹಿತಿ ಶರಣಕುಮಾರ್ ಲಿಂಬಾಳೆ ಉದ್ಘಾಟಿಸಲಿದ್ದಾರೆ. ಡಾ.ಕೆ.ವಿ.ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮ್ಮೇಳನದ ವಿಶೇಷವೇನು?
ಉದ್ಘಾಟನಾ ಗೋಷ್ಠಿಯ ನಂತರ ಎರಡನೇ ಗೋಷ್ಠಿಯಲ್ಲಿ ಮತೀಯತೆ, ವೈದಿಕತೆ ವಿರುದ್ಧ ತತ್ವ ಪದಗಳ ಪ್ರಸ್ತುತಿ ಇರಲಿದೆ. ಉಳಿದಂತೆ ಸಮಾನತೆಯ ಆಶಯ ಮತ್ತು ಮೀಸಲಾತಿ, ತುಳುನಾಡಿನ ಸಾಂಸ್ಕೃತಿಕ - ನೆಲಮೂಲ ಪರಂಪರೆಗಳು, ಕವಿಗೋಷ್ಠಿ, ಜಾತಿ ವಿನಾಶ ಮತ್ತು ನಾನು ಹಾಗೂ ಮುಸ್ಲಿಂ- ದಲಿತ - ಹಿಂದುಳಿದ ವರ್ಗಗಳ ಐಕ್ಯತೆ: ಸವಾಲು - ಸಾಧ್ಯತೆ ಗೋಷ್ಠಿಗಳು ನಡೆಯಲಿವೆ.

24ರ ಸಂಜೆ ಕುರಲ್ ಕಲಾತಂಡ ಕುಡ್ಲ, ಫೇಸ್ ಟ್ರಸ್ಟ್ ತಂಡ ಮಂಗಳೂರು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.['ಅನಕ್ಷರತೆಯಂತೆ ತರ್ಕ ಹೀನತೆಯೂ ರೋಗಿಷ್ಠ ಅವಸ್ಥೆ....']
ಡಾ.ವಿಜಯ, ಡಾ.ನಾಗಪ್ಪ ಗೌಡ, ಎರಿಕ್ ಒಝಾರಿಯೊ, ಅಬ್ದುಲ್ ಸಲಾಂ ಪುತ್ತಿಗೆ, ಡಾ.ಮೀನಾಕ್ಷಿ ಬಾಳಿ, ಡಾ.ಸಿ.ಜಿ.ಲಕ್ಷ್ಮಿಪತಿ, ಪ್ರೊ.ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಬಂಜಗೆರೆ ಜಯಪ್ರಕಾಶ್, ಡಾ.ಅರವಿಂದ ಮಾಲಗತ್ತಿ, ದಿನೇಶ್, ಡಾ.ಎಚ್.ಎಸ್. ಅನುಪಮಾ, ರಾಜಪ್ಪ ದಳವಾಯಿ, ಹುಲಿಕುಂಟೆ ಮೂರ್ತಿ, ಪ್ರದೀಪ್ ರಮಾವತ್,
ಡಾ.ಕಿರಣ್ ಗಾಜನೂರು, ಡಾ.ಅಪ್ಪಗರೆ ಸೋಮಶೇಖರ್ ಪ್ರೊ.ಪುರುಷೋತ್ತಮ ಬಿಳಿಮಲೆ, ಮೂಡ್ನಾಕೋಡು ಚಿನ್ನಸ್ವಾಮಿ, ಶಿವಾಜಿ ಗಣೇಶನ್, ಡಾ.ಸಬಿತಾ ಬನ್ನಾಡಿ, ಮಲ್ಲಿಕಾ ಬಸವರಾಜು, ಶೈಲಜಾ ನಾಗರಘಟ್ಟ, ವಿ.ಕೆ.ಸಂಜ್ಯೋತಿ, ಭಾರತೀ ದೇವಿ ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿಗಳು ಎರಡು ದಿನಗಳ ಕಾಲ ಜನನುಡಿಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿನಿಧಿಗಳಿಗೆ ಉಚಿತ ಊಟ-ವಸತಿ ಕಲ್ಪಿಸಲಾಗಿದೆ.












Click it and Unblock the Notifications