ಬಾಹುಬಲಿ ಮಹಾಮಸ್ತಕಾಭಿಷೇಕ:ಧರ್ಮಸ್ಥಳಕ್ಕೆ ಹರಿದುಬರುತ್ತಿದೆ ಭಕ್ತರ ದಂಡು
ಮಂಗಳೂರು, ಫೆಬ್ರವರಿ 12: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಮನೆ ಮಾಡಿದೆ. ಬಾಹುಬಲಿ ಬೆಟ್ಟದಲ್ಲಿ ಮಹಾಮಸ್ತಕಾಭಿಷೇಕದ ಪೂಜಾ ವಿಧಿವಿಧಾನಗಳು ಭರದಿಂದ ಸಾಗುತ್ತಿವೆ. ವೈರಾಗ್ಯ ಮೂರ್ತಿ ಪಾದಗಳಿಗೆ ಪ್ರತಿದಿನ ಅಭಿಷೇಕಗಳು ನಡೆಯುತ್ತಿವೆ.12 ವರ್ಷಗಳಿಗೊಮ್ಮೆ ನಡೆಯುವ ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಧರ್ಮಸ್ಥಳದತ್ತ ಹರಿದುಬರುತ್ತಿದೆ.
ಮಹಾಮಸ್ತಕಾಭಿಷೇಕ ಸಂಭ್ರಮದ 5 ದಿನಗಳು ಪೂರ್ಣಗೊಂಡಿದ್ದು, ಇಡೀ ಧರ್ಮಸ್ಥಳ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಮುಂಜಾನೆಯಿಂದಲೇ ಬಾಹುಬಲಿಗೆ ಅಭಿಷೇಕ, ಪೂಜಾ ವಿಧಾನ, ಯಜ್ಞ ಯಾಗಾದಿಗಳು ನಡೆಯುತ್ತಿವೆ.ಜೈನ ಮುನಿಗಳ ಸಮ್ಮುಖದಲ್ಲಿ ಬಾಹುಬಲಿಯ ಆರಾಧನೆ ನಡೆಯುತ್ತಿದೆ.

ಫೆಬ್ರವರಿ 15ರವರೆಗೆ ಬಾಹುಬಲಿ ಸ್ವಾಮಿಯ ಪಾದಗಳಿಗೆ ಕುಂಕುಮ, ಚಂದನ, ಎಳನೀರು, ಕಲಶಾಭಿಷೇಕಗಳು ನಡೆದರೆ, ಫೆಬ್ರವರಿ 16 ರಿಂದ 19ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿವೀರೇಂದ್ರ ಹೆಗ್ಗಡೆ ಕುಟುಂಬಸ್ಥರಿಂದ ಬಾಹುಬಲಿ ಜಲಾಭಿಷೇಕ, ಕಬ್ಬಿನ ಹಾಲು, ಸೀಯಾಳ,ಕಷಾಯ, ಕುಂಕುಮ, ಚಂದನದ ಅಭಿಷೇಕ ನಡೆಯಲಿದೆ.

ಜೈನ ಮುನಿಗಳ ನಿರ್ದೇಶನದಂತೆಯೇ ಪ್ರಾತಃಕಾಲದಲ್ಲಿಯೇ ಅಭಿಷೇಕಾಧಿ ಕ್ರಿಯೆಗಳು ನಡೆಯಲಿದ್ದು, ಬಾಹುಬಲಿಗೆ ನಡೆಯುವ ಈ ಮಹಾಮಸ್ತಕಾಭಿಷೇಕದ ವೈಭವ ಕಾಣಲು ದೇಶದ ವಿವಿಧೆಡೆಯಿಂದ ಜಿನ ಭಕ್ತರು ಧರ್ಮಸ್ಥಳದತ್ತ ಬರಲಿದ್ದಾರೆ.
ವೈರಾಗ್ಯ ಮೂರ್ತಿಯ ಮಹಾಮಜ್ಜನಕ್ಕೆ ದಿನಗಣನೆ ಆರಂಭವಾಗಿದ್ದು, ಇಡೀ ಧರ್ಮಸ್ಥಳ ಸ್ವರ್ಗದಂತೆ ಕಂಗೊಳಿಸುತ್ತಿದೆ.












Click it and Unblock the Notifications