ವಿಮಾನ ನಿಲ್ದಾಣ ಹೆಸರು ಬದಲಾಯಿಸದಿದ್ದರೆ ಉಗ್ರ ಹೋರಾಟ: ಐವಾನ್ ಡಿಸೋಜಾ
ಮಂಗಳೂರು; ಏಪ್ರಿಲ್ 14: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿನ ಫಲಕದಲ್ಲಿ ಅದಾನಿ ಹೆಸರನ್ನು ತೆಗೆಯದಿದ್ದರೆ ಫಲಕಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸುವುದಾಗಿ ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಸವಾಲು ಹಾಕಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐವಾನ್ ಡಿಸೋಜಾ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಕಡಿಮೆಯಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಗತಿ ಕುಂಠಿತವಾಗಿದೆ.
ದೆಹಲಿ, ಮುಂಬೈ ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಗಿದೆ. ಬೆಳಗಾವಿ, ಕಲಬುರಗಿ, ಗೋವಾ, ಮೈಸೂರಿಗೆ ಮಂಗಳೂರಿನಿಂದ ಹೋಗಲು ವಿಮಾನ ಇಲ್ಲ. ನಮ್ಮ ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವಿಮಾನ ಕಂಪನಿಗಳು ಮಂಗಳೂರಿನಿಂದ ವಿಮಾನಗಳನ್ನು ಹಾರಾಟ ಮಾಡಲು ಮುಂದೆ ಬರುತ್ತಿಲ್ಲ. ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಮುಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಐವಾನ್ ಡಿಸೋಜಾ ಆರೋಪಿಸಿದರು.
ಮಂಗಳೂರಿನ ವಿಮಾನ ನಿಲ್ದಾಣವನ್ನು ಅದಾನಿ ಎಂದು ಹೆಸರನ್ನಿಟ್ಟು ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಮೂಲಕ ಆಸ್ತಿ ಗುಳುಂ ಮಾಡಲು ಹೊರಟಿದ್ದನ್ನು ನೋಡಿ ನಾವು ಸುಮ್ಮನೇ ಕೂರಬೇಕೇ?, ಮಂಗಳೂರು ಏರ್ ಪೋರ್ಟ್ ನಲ್ಲಿ ಪ್ರವಾಸೋದ್ಯಮ ಮತ್ತು ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಯಾವುದೇ ವ್ಯವಸ್ಥೆ ಇಲ್ಲ ಎಂದರು.

ವಿಮಾನ ನಿಲ್ದಾಣದಿಂದ ನಗರಕ್ಕೆ ಹೋಗಲು ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕೂಡಾ ಇಲ್ಲ. ವಿಮಾನ ನಿಲ್ದಾಣದಲ್ಲಿ arrival & departure ಬೇರೆ ಬೇರೆ ಕಡೆ ವ್ಯವಸ್ಥೆ ಮಾಡಲು ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಸಿದರು ಇನ್ನೂ ಜಾರಿಯಾಗಿಲ್ಲ ಅಂತಾ ಆರೋಪಿಸಿದ್ದಾರೆ.
ಮಂಗಳೂರು ಏರ್ ಪೋರ್ಟ್ ಅಭಿವೃದ್ಧಿ ಮಾಡುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿಫಲರಾಗಿದ್ದಾರೆ ಎಂದು ಐವಾನ್ ಡಿಸೋಜಾ ದೂರಿದರು.












Click it and Unblock the Notifications