ಉಗ್ರರ ಕುರಿತು ಗುಪ್ತಚರ ವರದಿ: ಮಂಗಳೂರಿನಲ್ಲಿಯೂ ಕಟ್ಟೆಚ್ಚರ
ಮಂಗಳೂರು ಅಗಸ್ಟ್ 16: ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಕರಾವಳಿ ನಗರ ಮಂಗಳೂರಿನಲ್ಲೂ ಉಗ್ರರ ದಾಳಿ ಸಾಧ್ಯತೆ ಎಚ್ಚರಿಕೆಯಿಂದಾಗಿ ನಗರದಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ.
ಕಡಲ ತಡಿಯ ಮಂಗಳೂರಿನಲ್ಲಿ ಕೂಡ ಉಗ್ರರ ದಾಳಿ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರಿನ ಪ್ರಮುಖ ಸ್ಥಳ, ಇನ್ಫೋಸಿಸ್, ಆಸ್ಪತ್ರೆ, ಸೇರಿದಂತೆ ವಿವಿಧೆಡೆ ಪೊಲೀಸರ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಮೀನುಗಾರರಿಗೆ ಕೂಡ ದಕ್ಷಿಣ ಕನ್ನಡ ಜಿಲ್ಲಾಡಳಿತ ಈಗಾಗಲೇ ಈ ಸಂಬಂಧ ಸೂಚನೆ ನೀಡಿದ್ದು, ಸಮುದ್ರದಲ್ಲಿ ಅನುಮಾನಾಸ್ಪದ ಬೋಟ್ ಬಂದರೆ ತಿಳಿಸಲು ನಿರ್ದೇಶನ ನೀಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂದರು, ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ನಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಒಂಬತ್ತು ಮಂದಿ ಬಂಧನ:
ಮಂಗಳೂರಿನ ಕದ್ರಿ ಪೊಲೀಸರು ಒಂಬತ್ತು ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಪಂಪ್ವೆಲ್ ಬಳಿಕ ಲಾಡ್ಜ್ ಒಂದರಲ್ಲಿ ಮಂಗಳೂರು, ಮಡಿಕೇರಿ ಮತ್ತು ಕೇರಳ ಮೂಲದ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿಗಳು ಆಗಮಿಸಿದ್ದ ಕಾರ್ನ ಮೇಲೆ 'ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ, ಭಾರತ ಸರ್ಕಾರ' ಎಂದು ಬರೆಯಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications