ಭೂತಾರಾಧನೆಗೆ ಅವಮಾನ; ಬಿ.ಟಿ. ಲಲಿತಾ ನಾಯಕ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು
ಮಂಗಳೂರು, ನವೆಂಬರ್, 13: ''ತುಳುನಾಡಿನ ಭೂತಾರಾಧನೆ ಮೂಢನಂಬಿಕೆ'' ಎಂದಿರುವ ಸಾಹಿತಿ ಬಿ.ಟಿ.ಲಲಿತಾ ನಾಯಕ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಗೆ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ದೂರು ನೀಡಿದ್ದಾರೆ. ಭಾರತೀಯ ದಂಡಸಂಹಿತೆ 295ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಲಿಖಿತ ದೂರು ನೀಡಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ ಪ್ರಕರಣ ದಾಖಲಿಸುವಂತೆ ಉಡುಪಿ ನಗರ ಠಾಣೆಗೆ ದೂರು ಮನವಿ ಮಾಡಿದ್ದಾರೆ
ಹಿಂದೂ ಜಾಗರಣ ವೇದಿಕೆ ಮುಂದೆ ನ್ಯಾಯಾಲಯದಲ್ಲೂ ಖಾಸಗಿ ದೂರು ದಾಖಲಿಸುವ ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಲಲಿತಾ ನಾಯಕ್ ಹೇಳಿಕೆಯಿಂದ ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿಯಾಗಿದೆ. ಒಂದು ವರ್ಗ, ಸಮುದಾಯಕ್ಕೆ ಅವಹೇಳನ ಆದಾಗ ನಿಯಮದಂತೆ ಸೆಕ್ಷನ್ ಅಡಿ ದೂರು ದಾಖಲಿಸುವಂತೆ ಮನವಿ ಮಾಡಿದ್ದೇವೆ. ಮೂರು ವರ್ಷ ಶಿಕ್ಷೆ, ದಂಡ ವಿಧಿಸಬೇಕು ಎಂದು ಒತ್ತಾಯ ಮಾಡಿದೆ.
ಲಲಿತಾ ನಾಯಕ್ ವಿರುದ್ಧ ಶ್ರೀಕಾಂತ್ ಕಿಡಿ
ದೈವಾರಾದನೆ ಮೂಢನಂಬಿಕೆ, ವೇಷ ಕಟ್ಟಿ ಕುಣಿಯುತ್ತಾರೆ. ಮಾನಸಿಕ ಸಮಸ್ಯೆ ಅಂತೆಲ್ಲಾ ಲಲಿತಾ ನಾಯಕ್ ಅವರು ಮಾತನಾಡಿದ್ದಾರೆ. ಬಿ.ಟಿ.ಲಲಿತಾ ನಾಯಕ್ ಅವರ ಹೇಳಿಕೆಯನ್ನು ಕಟುವಾಗಿ ಖಂಡಿಸುತ್ತೇವೆ. ತುಳುನಾಡಿನ ಕೋಟ್ಯಂತರ ಜನರ ಭಾವನೆಗೆ ಧಕ್ಕೆಯಾಗಿದೆ. ಹಿಂದೂ ಜಾಗರಣ ವೇದಿಕೆ ಇದನ್ನು ಖಂಡಿಸುತ್ತದೆ. ತುಳು ನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿರುವುದು ಸಹಿಸಲು ಸಾಧ್ಯವಿಲ್ಲ. ಬಯಲು ಸೀಮೆಯವರಿಗೆ ತುಳುನಾಡಿನ ದೈವಾರಾದನೆ ಬಗ್ಗೆ ಸ್ಪಷ್ಟ ಚಿತ್ರಣ, ಕಲ್ಪನೆ ಇಲ್ಲ. ಆಪ್ತಮಿತ್ರ, ನಾ ನಿನ್ನ ಬಿಡಲಾರೆ ಮೊದಲಾದ ಚಿತ್ರಗಳಲ್ಲಿ ಬರುವ ದೈವಗಳು ಆರಾಧನೆ ಆಗಲ್ಲ ಅಂತಾ ಶ್ರೀಕಾಂತ್ ಶೆಟ್ಟಿ ಕಿಡಿಕಾರಿದ್ದಾರೆ.

ದೈವಾರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗ
ದೈವಾರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಮನೆಗಳಲ್ಲಿ ದೈವಕ್ಕೆ ಮೊದಲು ಕೈ ಮುಗಿದು ಮುಂದಿನ ಕೆಲಸ ಮಾಡುವ ಸಂಪ್ರದಾಯ ಇದೆ. ನಮ್ಮ ನೆಲಮೂಲದ ಧೈವಗಳಿಗೆ ಮೊದಲ ಸ್ಥಾನ, ಆನಂತರದಲ್ಲಿ ದೇವರಿಗೆ ಆದ್ಯತೆ ಇರುತ್ತದೆ. ದೈವಾರಾದನೆ ಕುರಿತು ಹಾದಿ ಬೀದಿಯಲ್ಲಿ ಹೋಗುವವರು ಹಗುರವಾಗಿ ಮಾತನಾಡಿದರೆ ಸಹಿಸಲು ಆಗುವುದಿಲ್ಲ. ದೈವಾರಾಧಕರನ್ನು ಬಿ.ಟಿ.ಲಲಿತಾ ನಾಯಕ್ ಹೀಯಾಳಿಸಿದ್ದಾರೆ. ಸರ್ಕಾರಕ್ಕೆ ಮಾಸಾಶನ ನಿಲ್ಲಿಸಲು ಲಲಿತಾ ನಾಯಕ್ ಮನವಿ ಮಾಡಿದ್ದಾರೆ.

ಬಡವರ ಶೋಷಿತರ ಪರ ಎನ್ನುವ ವಿಚಾರವಾದಿಗಳು, ಕೆಳ ಸಮುದಾಯ ಎಂದು ಗುರುತಿಸಿಕೊಂಡಿರುವ ಪಾಣಾರ, ಪಂಬದ, ನಲಿಕೆ ಹಿರಿಯರಿಗೆ ಸಣ್ಣ ಮಾಸಾಶನ ನೀಡಲು ಸರ್ಕಾರ ಮುಂದಾಗಿದೆ. ಈ ಸಣ್ಣ ಮಾಸಾಶನವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ದೈವಾರಾದನೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದರೆ ತುಳುನಾಡಿನ ಜನರು ಸುಮ್ಮನಿರಲ್ಲ ಎಂದು ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications