GST ಹೆಸರಿನಲ್ಲಿ ಸುಲಿಗೆಗೆ ಒಳಗಾಗುತ್ತಿದ್ದಾರೆ ಮಂಗಳೂರಿನ ಗ್ರಾಹಕರು
ಮಂಗಳೂರು, ಜುಲೈ 19: ದೇಶದಾದ್ಯಂತ ಸರಕು ಸೇವಾ ತೆರಿಗೆ ಜಾರಿಗೊಂಡ ನಂತರ ಸರಕುಗಳ ಮೇಲೆ ಪರಿಷ್ಕೃತ ದರ ಎಂದು ಮುದ್ರಿಸಲೇಬೇಕು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಆದರೆ ವ್ಯಾಪಾರಿ ವಲಯದ ಹೆಚ್ಚಿನ ಕಡೆಗಳಲ್ಲಿ ಸರ್ಕಾರದ ಈ ಸೂಚನೆ ಪಾಲನೆಯಾಗದೆ ಗ್ರಾಹಕರ ಸುಲಿಗೆ ಮುಂದುವರೆದಿದೆ.
ಪ್ರತಿಯೊಂದು ಉತ್ಪನ್ನಗಳ ಮೇಲೂ ಜಿಎಸ್ಟಿ ಅನ್ವಯ ಪರಿಷ್ಕೃತ ದರ ಮುದ್ರಿಸಬೇಕು. ಇಲ್ಲವಾದರೆ, ಜೈಲು ಶಿಕ್ಷೆಯಂಥ ಗಂಭೀರ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿತ್ತು. ಆದರೆ ಮಂಗಳೂರಿನಲ್ಲಿ ಇದನ್ನು ಯಾರು ಗಂಭೀರವಾಗಿ ಪರಿಗಣಿದಂತೆ ಕಾಣುತ್ತಿಲ್ಲ. ಅಂಗಡಿಗಳಲ್ಲಿ ಸರಕುಗಳ ಮೇಲೆ ಈ ಹಿಂದಿನ ದರದ ಜತೆಯಲ್ಲಿ ಜಿಎಸ್ಟಿ ದರ ಗೋಚರಿಸುತ್ತಿಲ್ಲ. ಹೆಚ್ಚಿನ ಕಡೆಗಳಲ್ಲಿ ಬಿಲ್ ನಲ್ಲೂ ಹಳೆ ದರವೇ ನಮೂದಾಗಿರುವುದು ಕಂಡು ಬರುತ್ತಿದೆ.

ಪ್ರತ್ಯೇಕ ಮುದ್ರಣ ಕಾನೂನು ಬದ್ದ ಮಾಪನ ಕಾಯಿದೆ 2009ರ ಅಧಿ ನಿಯಮದ ಪ್ರಕಾರ ಪ್ಯಾಕ್ ಮಾಡಲ್ಪಟ್ಟ ಸರಕುಗಳ ಮೇಲೆ ಗರಿಷ್ಠ ಮಾರಾಟ ದರ (ಎಂಆರ್ ಪಿ) ನಮೂದಿಸಬೇಕು. ಜಿಎಸ್ಟಿ ಬಂದ ಮೇಲೆ ಹಳೆಯ ದರದ ಪಕ್ಕದಲ್ಲೇ ಹೊಸ ದರದ ಲೇಬಲ್ ಹಾಕಬೇಕು. ಹಳೆ ದರ ಕೂಡಾ ಸ್ಪಷ್ಟವಾಗಿ ಕಾಣುವಂತಿರಬೇಕು.
ನೂತನ ಜಿಎಸ್ಟಿ ಪ್ರಕಾರ ಶೇ. 81 ರಷ್ಟು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಇಳಿಕೆಯಾಗಿದೆ. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ವಸ್ತುಗಳ ಮೇಲೆ ದರಗಳು ಮುದ್ರಿತವಾಗಿದ್ದು ಇಳಿಕೆಯಾದ ವಸ್ತುಗಳ ಮೇಲಿನ ಲಾಭವನ್ನು ಯಾರೂ ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಆದರೆ ಜಿಎಸ್ಟಿ ಅನ್ವಯ ಹೆಚ್ಚಳವಾದ ಕೆಲವು ವಸ್ತುಗಳನ್ನು ಹೊಸ ದರದಲ್ಲೇ ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬಂದಿದೆ.

"ಕೇಂದ್ರ ಸರ್ಕಾರ ಒಳ್ಳೆಯ ಉದ್ದೇಶದಿಂದ ಈ ಪದ್ದತಿ ಜಾರಿಗೆ ತಂದರೂ, ಸದ್ಯದ ಮಟ್ಟಿಗೆ ಗ್ರಾಹಕರಿಗೆ ಹಲವು ರೀತಿಯಲ್ಲಿ ವಂಚನೆಯಾಗುತ್ತಿದೆ. ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ವಹಿಸದೇ ಇದ್ದರೆ ಇನ್ನು ಮೂರೂ ತಿಂಗಳವರೆಗೆ ಗ್ರಾಹಕರು ಜಿಎಸ್ಟಿ ಹೆಸರಿನಲ್ಲಿ ಸುಲಿಗೆಗೆ ಒಳಗಾಗುವುದು ಪಕ್ಕಾ," ಎಂಬುದು ಗ್ರಾಹಕ ರಾಜೇಶ್ ಶೆಟ್ಟಿ ಅಭಿಪ್ರಾಯವಾಗಿದೆ.












Click it and Unblock the Notifications