ಬಿಜೆಪಿಗೆ ಕಷ್ಟ ಬಂದಾಗ ರಾಮ ನೆನಪಾಗುತ್ತಾನೆ: ಸಿದ್ದರಾಮಯ್ಯ
Recommended Video

ಮಂಗಳೂರು, ಡಿಸೆಂಬರ್ 04 : ನಾನು ಅಧಿಕಾರದಲ್ಲಿದ್ದಾಗ 3,100 ಕೋಟಿ ಅನುದಾನ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದೆ. ಈಗ ಅಧಿಕಾರದಲ್ಲಿ ಇದ್ದಿದ್ರೆ ಅಲ್ಪಸಂಖ್ಯಾತರಿಗೆ 10,000 ಕೋಟಿ ಅನುದಾನ ಕೊಡುತ್ತಿದ್ದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ನಡೆದ ಎಸ್ಎಸ್ಎಫ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯ ಮನುಷ್ಯನನ್ನ ದ್ವೇಷಿಸಲು ಯಾವ ಧರ್ಮ ಹೇಳಿಲ್ಲ. ದಯೆಯೇ ಧರ್ಮದ ಮೂಲ ಎಂದು ಬಸವಣ್ಣ ವ್ಯಾಖ್ಯಾನಿಸಿದ್ದಾರೆ. ದಯೆ, ಮನುಷ್ಯತ್ವ ಇಲ್ಲದ ಧರ್ಮ , ಧರ್ಮವೇ ಅಲ್ಲ. ಕೆಲವರು ಸ್ವಾರ್ಥಕ್ಕೋಸ್ಕರ ಸಮಾಜವನ್ನು ವಿಭಜಿಸುತ್ತಾರೆ. ಯಾರು ಇನ್ನೊಂದು ಧರ್ಮವನ್ನ ದ್ವೇಷಿಸುತ್ತಾರೋ ಅಂತವರು ಕೋಮುವಾದಿಗಳು ಎಂದರು.
ಎಲ್ಲಾ ಧರ್ಮಗಳು ಕೂಡ ಸಮಾನವಾಗಿದೆ ಎಂದು ಹೇಳಿದ ಸಿದ್ದರಾಮಯ್ಯ ಇನ್ನೊಂದು ಧರ್ಮವನ್ನು ದ್ವೇಷಿಸಬಾರದು. ಸಂವಿಧಾನ ಸಹಬಾಳ್ವೆಯಿಂದ ಬದುಕಿ ಎಂದು ಹೇಳಿದೆ. ಸಂವಿಧಾನದ ಪ್ರಕಾರ ಸರ್ಕಾರ ನಡೆಯುತ್ತದೆ. ವೋಟ್ ಗೋಸ್ಕರ ಯಾರನ್ನು ಓಲೈಸುವಂತಿಲ್ಲ.

ನಾನು ಅಪಪ್ರಚಾರಕ್ಕೆ ಯಾವತ್ತೂ ಹೆದರಿಲ್ಲ, ಬಗ್ಗಿಲ್ಲ. ಕೆಲವರು ಸಂವಿಧಾನ ಬದಲಾವಣೆ ಮಾಡಲು ಮುಂದಾಗುತ್ತಾರೆ. ಒಬ್ಬ ಮಂತ್ರಿ ಸಂವಿಧಾನ ಬದಲಾಯಿಸುವ ಹೇಳಿಕೆ ಕೊಡುತ್ತಾನೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಕಷ್ಟ ಬಂದಾಗ ರಾಮ ನೆನಪಾಗುತ್ತಾನೆ. ಹೀಗಾಗಿ ಬಿಜೆಪಿ ಪಡೆ ಈಗ ರಾಮನನ್ನ ಹಿಡಿದುಕೊಂಡಿದೆ. ನಾವು ಸಂವಿಧಾನ ರಕ್ಷಿಸಲು ಕಟಿಬದ್ಧರಾಗಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications