ಪಂಜುರ್ಲಿ ವೇಷ ಹಾಕಿ ರೀಲ್ಸ್: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ ಶ್ವೇತಾ ರೆಡ್ಡಿ
ಮಂಗಳೂರು, ನವೆಂಬರ್ 4: ಕಾಂತಾರ ಚಿತ್ರದ ಪಂಜುರ್ಲಿ ದೈವದ ವೇಷವನ್ನು ಧರಿಸಿ ರೀಲ್ಸ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಭಾರಿ ವಿವಾದದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿದ್ದಾರೆ.
ಕುಟುಂಬ ಸಮೇತ ಧರ್ಮಸ್ಥಳಕ್ಕೆ ಆಗಮಿಸಿದ ಶ್ವೇತಾ ರೆಡ್ಡಿ, ಅರಿಯದೇ ಮಾಡಿರುವ ಕೆಲಸಕ್ಕೆ ಕ್ಷಮೆ ನೀಡು ಅಂತಾ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೇ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಮುಂದೆ ಕ್ಷಮೆಯಾಚಿಸಿದ್ದಾರೆ. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಕೋರಿದ್ದಾರೆ.
ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕನಸಿನ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ವೇತಾ ರೆಡ್ಡಿ, "ಪಂಜುರ್ಲಿ ದೈವದ ವೇಷ ಹಾಕಿದ ಬಳಿಕ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬಂತು. ನಾನು ಯಕ್ಷಗಾನ ಮತ್ತು ದೈವಾರಾಧನೆ ಒಂದೇ ಅಂತಾ ಭಾವಿಸಿದ್ದೆ" ಎಂದು ಹೇಳಿದರು.
ಇನ್ನು "ಬೇರೆಯವರ ಭಾವನೆಗಳಿಗೆ ಘಾಸಿ ಮಾಡಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಧರ್ಮಸ್ಥಳ ಕ್ಕೆ ಬಂದು ಈ ಕೆಲಸ ಮಾಡಿರುವುದಕ್ಕೆ ತಪ್ಪು ಕಾಣಿಕೆ ಹಾಕಿದ್ದೇನೆ. ನನಗೆ ದೈವಾರಾಧನೆಯ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಕಾಂತಾರ ಚಿತ್ರ ನೋಡಿ ಈ ತರಹದ ವೇಷ ಹಾಕಿದ್ದೇನೆ. ಆ ಬಳಿಕ ನಾನು ಮಾಡಿರುವುದು ತುಂಬಾ ತಪ್ಪು ಅಂತಾ ಗೊತ್ತಾಗಿದೆ. ಇನ್ನು ಈ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ. ಈಗ ಹುಡುಗಿರು ಈ ತರಹದ ವೇಷ ಹಾಕಬಾರದೆಂದು ಗೊತ್ತಾಗಿದೆ. ಇದಕ್ಕೂ ಬಹಳ ಕಟ್ಟುಪಾಡುಗಳಿವೆ ಅಂತಾ ಗೊತ್ತಾಗಿದೆ. ದೈವ ಕೋಲ ನೋಡಬೇಕು ಅಂತಾ ಮನಸ್ಸಿನಲ್ಲಿ ಆಸೆ ಇದೆ. ಹಿರಿಯರ ಅಭಿಪ್ರಾಯ ಪಡೆದು ಮುಂದೆ ನೋಡುತ್ತೇನೆ" ಎಂದು ಹೇಳಿದ್ದಾರೆ.
ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ
ಕನ್ನಡದಲ್ಲಿ ತೆರೆಕಂಡು ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸ್ಯಾಂಡಲ್ವುಡ್ನ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಪತ್ನಿ ಪ್ರಗತಿ ಶೆಟ್ಟಿ ಜೊತೆ ಧರ್ಮಸ್ಥಳಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ರಿಷಬ್ ಶೆಟ್ಟಿ ದಂಪತಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಸಹ ಉಪಸ್ಥಿತರಿದ್ದರು. ಕಾಂತಾರ ಸಿನಿಮಾ ಬಗ್ಗೆ ಸಿನಿಮಾದ ಕಥಾವಸ್ತು ಬಗ್ಗೆ ರಿಷಬ್ ಶೆಟ್ಟಿ ಹಾಗೂ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರು ಕೆಲಕಾಲ ಚರ್ಚೆ ನಡೆಸಿದ್ದರು.
ಸರ್ಕಾರದ ವಿರುದ್ಧ ಬಿಲ್ಲವ ಸಮಾಜ ಆಕ್ರೋಶ: ಜನವರಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ