ರತ್ನಾಕರ್ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿಲ್ಲ ವೈದ್ಯರ ಸ್ಪಷ್ಟನೆ
ಮಂಗಳೂರು, ಜೂನ್ 15 : ಕಲ್ಲಡ್ಕದ ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ಘಟಕದ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ರತ್ನಾಕರ್ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎನ್ನುವ ಊಹಪೋಹಗಳಿಗೆ ಸ್ಪಷ್ಟನೆ ಸಿಕ್ಕಿದೆ.
ರತ್ನಾಕರ್ ಶೆಟ್ಟಿ ಆಸ್ಪತ್ರಯಿಂದ ಪರಾರಿ ಆಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮಧ್ಯರಾತ್ರಿ ರತ್ನಾಕರ್ ಶೆಟ್ಟಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಆತನನ್ನು ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿತ್ತು ಮತ್ತು ಅವರಿಗೆ ಇಸಿಜಿ, ಎಕ್ಸರೇ ಮಾಡಲಾಗಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಇದೀಗ ಪುತ್ತೂರು ಆದರ್ಶ ಆಸ್ಪತ್ರೆಗೆ ರತ್ನಾಕರ ಶೆಟ್ಟಿ ಬಂದಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ರತ್ನಾಕರ್ ಶೆಟ್ಟಿ ಅವರನ್ನು ಪೊಲೀಸ್ ಕಾವಲಿನಲ್ಲಿ ಪುತ್ತೂರು ಆಸ್ಪತ್ರೆವೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದರೆ, ವೈದ್ಯರು ಪೊಲೀಸರಿಗೆ ತಿಳಿಸದೆ ರತ್ನಾಕರ್ ಶೆಟ್ಟಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆ ತಂದಿದ್ದರಿಂದ ರತ್ನಾಕರ್ ಶೆಟ್ಟಿ ಪರಾರಿ ಎಂಬ ವದಂತಿ ಹರಡಿತ್ತು.
ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಕರ್ತವ್ಯದಲ್ಲಿದ್ದ ಪಿಎಸ್ ಐ ಸೇರಿ ಮೂವರು ಪೇದೆಗಳನ್ನು ಅಮಾನತು ಮಾಡಲಾಗಿತ್ತು.












Click it and Unblock the Notifications