ಮಂಗಳೂರು ಪಾಲಿಕೆಗೆ ಕೊನೆಗೂ ಆಯುಕ್ತರ ನೇಮಕ
ಮಂಗಳೂರು, ಜ. 1 : ಸುಮಾರು ಆರು ತಿಂಗಳಿನಿಂದ ಖಾಲಿ ಇದ್ದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸ್ಥಾನವನ್ನು ಭರ್ತಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪಾಲಿಕೆಗೆ ಆಯುಕ್ತರನ್ನು ನೇಮಕ ಮಾಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸಚಿವ ವಿನಯ್ ಕುಮಾರ್ ಸೊರಕೆ ಅವರ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.
ಡಿ.31ರಂದು ಸರ್ಕಾರ ಪ್ರಸ್ತುತ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಉಪ ವಿಭಾಗಾಧಿಕಾಯಾಗಿ ಕಾರ್ಯ ನಿರ್ವಹಿಸುತ್ತಿರುವ ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.[ಮಂಗಳೂರು : ಸಚಿವ ಸೊರಕೆ ವಿರುದ್ಧ ಬಿಜೆಪಿ ಗರಂ]

ಈ ನೇಮಕದಿಂದಾಗಿ ಕಳೆದ ಹಲವು ತಿಂಗಳುಗಳಿಂದ ಗೋಜಲಾಗಿ ಪರಿಣಮಿಸಿದ್ದ ಆಯುಕ್ತ ಹುದ್ದೆಗೆ ಜೀವ ಬಂದಂತಾಗಿದೆ. ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರು ಅಧಿಕಾರ ವಹಿಸಿಕೊಳ್ಳುವ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಹಿಂದೆ ಅಜಿತ್ ಕುಮಾರ್ ಹೆಗ್ಡೆ ಅವರು ಪಾಲಿಕೆ ಆಯುಕ್ತರಾಗಿದ್ದರು. ಸರ್ಕಾರ ಅವರನ್ನು ಆರ್ಥಿಕ ಇಲಾಖೆಯ ಅಧಿಕಾರಿಯಾಗಿ ನೇಮಕಗೊಳಿಸಿ, ಆ ಜಾಗಕ್ಕೆ ಕೊಡಗು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರನ್ನು ನೇಮಕ ಮಾಡಿತ್ತು.
ಜು. 16ರಂದು ಪ್ರಸನ್ನ ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ, ಪುನಃ ಆ. 13ರಂದು ಅಜಿತ್ ಕುಮಾರ್ ಹೆಗ್ಡೆ ಅವರನ್ನು ಮರು ನೇಮಕ ಮಾಡಲಾಗಿತ್ತು. ಆದರೆ, ಅವರು ಅಧಿಕಾರಿ ಸ್ವೀಕರಿಸಿರಲಿಲ್ಲ, ಆದ್ದರಿಂದ ಪಾಲಿಕೆ ಆಯುಕ್ತರ ಹುದ್ದೆ ಬಗ್ಗೆ ಗೊಂದಲಗಳು ಉಂಟಾಗಿತ್ತು.
ಬಿಜೆಪಿ ಪ್ರತಿಭಟನೆ : ಪಾಲಿಕೆಗೆ ಆಯುಕ್ತರನ್ನು ನೇಮಕ ಮಾಡದ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಆರು ತಿಂಗಳಿನಿಂದ ಆಯುಕ್ತರ ಹುದ್ದೆ ಖಾಲಿ ಇದ್ದರೂ ನೇಮಕ ಮಾಡಲು ಸಚಿವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದ್ದರು.












Click it and Unblock the Notifications