Breaking: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ, ಸಹಾಯವಾಣಿ ಸಂಖ್ಯೆಗಳು
ಮಂಗಳೂರು, ಆ.03: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸುತ್ತಲಿನ ಪ್ರದೇಶದಲ್ಲಿ ನಾಗರ ಪಂಚಮಿಯ ಹಿಂದಿನ ದಿನದಿಂದ ಸುರಿಯುತ್ತಿರುವ ವರ್ಷಧಾರೆಗೆ ಭಾರೀ ಅವಾಂತರ ಸೃಷ್ಠಿಯಾಗಿದೆ. ಮಳೆಯಿಂದಾಗಿ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತವು ಕುಕ್ಕೆ ಸುಬ್ರಹ್ಮಣ್ಯ ದೇಗುಲ ದರ್ಶನಕ್ಕೆ ಮುಂದಿನ ಎರಡು ದಿನ ಬಾರದಂತೆ ಭಕ್ತರಿಗೆ ಮನವಿ ಮಾಡಿದೆ. ಎರಡು ದಿನಗಳ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮಂಗಳವಾರ ಸಂಜೆಯಿಂದ ಸುರಿದ ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಅಕ್ಷರಶಃ ನಲುಗಿ ಹೋಗಿದೆ. ಸುಬ್ರಹ್ಮಣ್ಯದ ಇತಿಹಾಸದಲ್ಲೇ ಈ ರೀತಿ ಮಳೆ ಸುರಿದಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ದರ್ಪಣತೀರ್ಥ ನದಿ ಮೈ ತುಂಬಿ ಹರಿದಿದ್ದು, ನದಿ ದಡದಲ್ಲಿರುವ ಆದಿಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ನೀರು ನುಗ್ಗಿದ್ದು, ದೇವಸ್ಥಾನವು ಮುಳುಗುವ ಆತಂಕ ಎದುರಾಗಿದೆ. ಅನೇಕ ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವನ್ನು ನೀರು ಪ್ರವೇಶಿಸಿದ್ದು, ಶ್ರೀ ದೇವಳದ ಒಳಾಂಗಣ, ಹೊರಾಂಗಣವು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಮತ್ತೊಂದೆಡೆ ದರ್ಪಣ ತೀರ್ಥ ನದಿಯ ನೀರು ಸುಬ್ರಹ್ಮಣ್ಯದ ಮುಖ್ಯ ದೇವಸ್ಥಾನಕ್ಕೂ ನುಗ್ಗಲು ಆರಂಭವಾಗಿದೆ. ದೇವರಗದ್ದೆ ಹಾಗೂ ಮಾನಾಡಿನ ನದಿಗಳು ಉಕ್ಕಿ ಹರಿದು ಹಲವು ಮನೆಗಳು ಜಲಾವೃತಗೊಂಡಿವೆ.
ನೂಚಿಲದ ಕೆಲವು ಮನೆಗಳಿಗೂ ನೀರು ನುಗ್ಗಿದೆ. ಕುಮಾರಧಾರ ಸೇತುವೆ ಹೊರತು ಪಡಿಸಿ ಇನ್ನುಳಿದ ಎಲ್ಲ ಸೇತುವೆಗಳು ಮುಳುಗಡೆಯಾಗಿದ್ದಲ್ಲದೇ ಅಪಾಯ ಮಟ್ಟ ಮೀರಿದೆ. ಕುಮಾರಧಾರೆಯೂ ಮುಳುಗಡೆಯಾದರೆ ಯಾವುದೇ ರಸ್ತೆ ಸಂಪರ್ಕವಿಲ್ಲದೆ ಕುಕ್ಕೆ ಸುಬ್ರಹ್ಮಣ್ಯವು ದ್ವೀಪವಾಗುವ ಸಾಧ್ಯತೆಗಳಿವೆ.

ಸುಬ್ರಹ್ಮಣ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಪರೀತ ಮಳೆಗೆ ಹಾನಿಗೊಳಗಾದ ಸಂತ್ರಸ್ತರು ತಕ್ಷಣ ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಸಂತ್ರಸ್ತರು ಈ ತುರ್ತು ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ.
ದೂರವಾಣಿ ಸಂಖ್ಯೆಗಳು
8618789923
9449579475
8088162533
7892008637












Click it and Unblock the Notifications